ಖಾನಾಪುರ: ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮೂರು ತಿಂಗಳಿನಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಶಾಲೆಯಲ್ಲಿ ನಡೆಯಿತು.ಈ ವೇಳೆ ಯೋಜನಾಧಿಕಾರಿ ಗಣಪತಿ ನಾಯ್ಕ ಮಾತನಾಡಿ, ಪ್ರೌಢಾವಸ್ಥೆ ಪ್ರತಿಯೊಬ್ಬರ ಜೀವನದ ಮುಖ್ಯ ಹಂತ. ಈ ಸಮಯದಲ್ಲಿ ಮಕ್ಕಳು ಒಳ್ಳೆಯ ಗುರಿ ಇಟ್ಟುಕೊಂಡು ಮುಂದುವರೆಯಬೇಕು. ಪರಿಶ್ರಮ ಪಟ್ಟು ಉತ್ತಮ ಶಿಕ್ಷಣ ಕಲಿತು ಸಮಾಜ ಮೆಚ್ಚುವ ವ್ಯಕ್ತಿಗಳಾಗಬೇಕು. ಉನ್ನತ ಹುದ್ದೆ ತಲುಪಿ ತಮ್ಮ ಹೆತ್ತವರ, ಕಲಿಸಿದ ಶಾಲೆಯ ಮತ್ತು ಊರಿನ ಗೌರವ ಹೆಚ್ಚಿಸಬೇಕು. ಗುರು ಹಿರಿಯರಿಗೆ ಮತ್ತು ತಂದೆತಾಯಿಗಳಿಗೆ ಗೌರವ ನೀಡುವುದನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ಪಾಟೀಲ ವಹಿಸಿದ್ದರು. ಟ್ಯೂಷನ್ ಕ್ಲಾಸ್ ಪಡೆದುಕೊಂಡ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು. ಸರಣಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಕ್ಷತಾ ಹಟ್ಟಿಹೊಳಿ ಸ್ವಾಗತಿಸಿದರು. ಯದುನಂದ ನಾಯ್ಕ ನಿರ್ವಹಿಸಿದರು. ಲಕ್ಷ್ಮೀ ಕಮಡೊಳ್ಳಿ ವಂದಿಸಿದರು. ಗಿರಿಜಾ ತಳವಾರ ನಿರೂಪಿಸಿದರು.