ಕನ್ನಡಪ್ರಭ ವಾರ್ತೆ ಬೆಂಗಳೂರು
‘ಆರೋಗ್ಯ ಕ್ಷೇತ್ರದಲ್ಲಿನ ನಾವೀನ್ಯತೆ, ಕ್ಲಿನಿಕಲ್ ಪರಿಣಿತಿ ಹಾಗೂ ರೋಗಿಗಳ ಆರೈಕೆ ಕುರಿತ ಬದ್ಧತೆಯಿಂದಾಗಿ ರಾಜ್ಯವು ಆರೋಗ್ಯ ರಕ್ಷಣೆಯಲ್ಲಿ ಶ್ರೇಷ್ಠತೆಯ ಕೇಂದ್ರವಾಗಿ ಪ್ರತಿಷ್ಠೆಗಳಿಸಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು 3,000 ಡಾ.ವಿನ್ಸಿ ರೋಬೊಟಿಕ್ ಶಸ್ತ್ರಚಿಕಿತ್ಸೆ ಪೂರೈಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇಂತಹ ಆಸ್ಪತ್ರೆಗಳ ಕ್ಲಿನಿಕಲ್ ಅನುಭವ ಹಾಗೂ ಸಾಮರ್ಥ್ಯಗಳು ಆರೋಗ್ಯ ಕರ್ನಾಟಕಕ್ಕೆ ಪೂರಕ ಎಂದು ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಫೋರ್ಟಿಸ್ ಆಸ್ಪತ್ರೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯಕೀಯ ತಂತ್ರಜ್ಞಾನಗಳಲ್ಲಿನ ಆವಿಷ್ಕಾರವು ರೋಗಿಗಳಿಗೆ ಸುರಕ್ಷಿತ ಆರೈಕೆ, ಉತ್ತಮ ಚಿಕಿತ್ಸೆಯ ಲಭ್ಯತೆ ಹಾಗೂ ಪೂರಕ ಫಲಿತಾಂಶವನ್ನು ಖಾತ್ರಿಪಡಿಸುತ್ತದೆ. ತಮ್ಮ ಕೌಶಲ್ಯ, ಶಿಸ್ತು ಮತ್ತು ಸಮರ್ಪಣಾ ಭಾವದಿಂದ 3,000 ರೋಬೊಟಿಕ್ ಶಸ್ತ್ರಚಿಕಿತ್ಸೆ ಸಾಧನೆ ಮಾಡಿರುವ ವೈದ್ಯಕೀಯ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಇದೇ ವೇಳೆ ಆಸ್ಪತ್ರೆಯಲ್ಲಿ ಇತ್ತೀಚೆಗೆ ತೀವ್ರ ಮುಟ್ಟಿನ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ 39 ವರ್ಷದ ವೈಷ್ಣವಿ ವಿನಯ್ ಅವರಿಗೆ ರೋಬೋ ತಂತ್ರಜ್ಞಾನದ ನೆರವಿನಿಂದ ಹಿಸ್ಟೆರೆಕ್ಟೊಮಿ ನಡೆಸಿ ಯಶಸ್ವಿಯಾಗಿರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ ವಿವಿಧ ಸಂಕೀರ್ಣ ಸಮಸ್ಯೆಗಳಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ದೊರಕಿಸಿಕೊಟ್ಟಿರುವ ಕುರಿತು ಮಾಹಿತಿ ಒದಗಿಸಲಾಯಿತು.
ಆಸ್ಪತ್ರೆಯ ರೀನಲ್ ಸೈನ್ಸಸ್ ವಿಭಾಗದ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ರೋಬೊಟಿಕ್ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ. ರುಬಿನಾ ಶಾನವಾಝ್, ರೋಬೋಟಿಕ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ಸುದರ್ಶನ್ ಜಿ.ಟಿ ಹಾಜರಿದ್ದರು.