ಇಂದಿನಿಂದ ಬೆಂಗಳೂರಲ್ಲಿ ಅಂ.ರಾ. ಚಲನಚಿತ್ರೋತ್ಸವ

| Published : Mar 01 2025, 01:00 AM IST

ಸಾರಾಂಶ

ಶನಿವಾರದಿಂದ 8 ದಿನ ನಡೆಯಲಿರುವ ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ, ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಶನಿವಾರದಿಂದ 8 ದಿನ ನಡೆಯಲಿರುವ ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ, ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್‌ಕುಮಾರ್, ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್, ಪೋಲೆಂಡ್ ರಾಯಭಾರಿ ಮೌಗುಜಾತ, ನಟಿ ಪ್ರಿಯಾಂಕಾ ಮೋಹನ್, ಎಂ.ನರಸಿಂಹುಲು ಭಾಗವಹಿಸಲಿದ್ದಾರೆ. ಚಲನಚಿತ್ರಗಳಿಗೆ ಸಂಬಂಧಿಸಿದ 5 ಪುಸ್ತಕಗಳು, ಕೈಪಿಡಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಗುತ್ತದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕೋರ್ ಸಮಿತಿ ಅಧ್ಯಕ್ಷರೂ ಆಗಿರುವ ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಈ ಮಾಹಿತಿ ನೀಡಿದರು.

ಉದ್ಘಾಟನಾ ಚಿತ್ರವಾಗಿ ಹಿಂದಿ ಭಾಷೆಯ ಪೈರ್ ಚಿತ್ರ ಪ್ರದರ್ಶವಾಗಲಿದೆ. ಮಾ.2ರಿಂದ ಒರಾಯನ್‌ ಮಾಲ್‌ನ 11 ಸ್ಕ್ರೀನ್‌ಗಳು, ಕಲಾಭವನ ಹಾಗೂ ಸುಚಿತ್ರ ಫಿಲಂ ಸೊಸೈಟಿಯಲ್ಲಿ ದೇಶ-ವಿದೇಶಗಳ ಅನೇಕ ಚಿತ್ರಗಳು ಪ್ರದರ್ಶನಗೊಳ್ಳಲಿವೆ. 3,000ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದು, ಎಲ್ಲಾ ಸೀಟ್‌ಗಳು ಭರ್ತಿಯಾಗಿವೆ. ಸಿನಿಮಾಸಕ್ತರ ಉತ್ಸಾಹ ಅಭೂತಪೂರ್ವವಾಗಿದೆ. ಸಿನಿಮಾ ನಿರ್ಮಾಣದಲ್ಲಿ ಕ್ರಿಯಾಶೀಲತೆ, ಚಿತ್ರೀಕರಣ, ಮಹಿಳೆಯರು ಮತ್ತು ಮಕ್ಕಳ ಸಿನಿಮಾಗಳು, ಕನ್ನಡ ಚಿತ್ರರಂಗದ ಆರ್ಥಿಕ ಸ್ವರೂಪ, ಬೆಳವಣಿಗೆ, ಕನ್ನಡ ಸಿನಿಮಾಗಳಿಗೆ ಪೂರಕವಾದ ಒಟಿಟಿ ಒದಗಿಸುವುದರ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.

ಚಿತ್ರರಂಗದ ಗಣ್ಯರೊಂದಿಗೆ ಸಿನಿಮಾದ ಹೊಸ ಆಯಾಮಗಳ ಕುರಿತು ಒಟಿಟಿ ವಲಯದ ಮುಖ್ಯಸ್ಥ ಶಿಜು ಪ್ರಭಾಕರನ್ ಸೇರಿದಂತೆ ಇನ್ನಿತರರ ಜೊತೆ ಚರ್ಚೆ ಏರ್ಪಡಿಸಲಾಗಿದೆ. ಸಿನಿಮಾ ನಿರ್ಮಾಣ ಮತ್ತು ವಿತರಣೆಯ ಸವಾಲುಗಳು, ಸಹಾಯಧನ, ವಿದೇಶಗಳಲ್ಲಿ ಶೂಟಿಂಗ್ ಮಾಡುವುದರ ಅನುಕೂಲಗಳ ಕುರಿತು ಸಿನಿಮಾ ರಂಗದ ಪ್ರಮುಖರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ಸಿನಿಮಾ ನಿರ್ಮಾಣ ಕುರಿತು ಸಂವಾದವನ್ನು ಎನ್‌ವಿಡಿಯಾದ ಮುಖ್ಯಸ್ಥ ಮತ್ತು ವಿಸಿಲಿಂಗ್ ವುಡ್ಸ್ ತಾಂತ್ರಿಕ ತಂಡದೊಂದಿಗೆ ಏರ್ಪಡಿಸಲಾಗಿದೆ ಎಂದು ಕಾವೇರಿ ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆ ಪ್ರಯುಕ್ತ ಮಾ.3ರಂದು ಆಚರಿಸುವ ವಿಶ್ವ ಕನ್ನಡ ಸಿನಿಮಾ ದಿನ ಅಂಗವಾಗಿ ಒರಾಯನ್ ಮಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಿತ್ರದ ಗೀತೆಗಳ ಗಾಯನದ ಜೊತೆಗೆ ಸಿನಿಮಾ ಕುರಿತಾದ ಆಸಕ್ತಿಕರ ವಿಚಾರಗಳು ಚರ್ಚೆಯಾಗಲಿದೆ ಎಂದು ಹೇಳಿದರು.

ನಟ ಕಿಶೋರ್ ಮಾತನಾಡಿ, ಅಂತಾರಾಷ್ಟ್ರೀಯ ಸಿನಿಮಾಗಳನ್ನು ನಮ್ಮ ಜನರಿಗೆ ಪರಿಚಯಿಸುವ ಪ್ರಯತ್ನವನ್ನು ಈ ಉತ್ಸವದಲ್ಲಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಪುಟ್ಟ ಮಾದರಿ ಸಿನಿಮಾ ಆಗಿದೆ. ಜನರ ದುಡ್ಡಿನಲ್ಲಿ ಮಾಡುವ ಸಿನಿಮಾದಲ್ಲಿ ಸಮಾಜದ ಪ್ರತಿಫಲನ ಕಾಣುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ ಎಂ.ನಿಂಬಾಳ್ಳ‌ರ್, ರಿಜಿಸ್ಟ್ರಾರ್‌ ಹಿಮಂತ್‌ ರಾಜು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಉಪಸ್ಥಿತರಿದ್ದರು.