ಫಲಪುಷ್ಪ ಪ್ರದರ್ಶನದಲ್ಲಿ ಕೇಂದ್ರ ಬಿಂದುವಾಗಿ ಹೂವಿನಿಂದ ಅಲಂಕೃತವಾದ ಶ್ರೀಸಿದ್ಧಾರೂಢರ ಕೈಲಾಸ ಮಂಟಪ, ಸಾಲುಮರದ ತಿಮ್ಮಕ್ಕನ ಕಲಾಕೃತಿ, ಸೆಲ್ಫಿ ಪಾಯಿಂಟ್ ಕಲಾಕೃತಿ ಹಾಗೂ ವಿವಿಧ 15ರಿಂದ 20 ಜಾತಿಯ ವಾರ್ಷಿಕ ಹೂವಿನ ತಳಿಗಳನ್ನು ಗುಚ್ಛಗಳ ಮಾದರಿಯಲ್ಲಿ ಮಾಡಲಾಗುತ್ತದೆ.

ಧಾರವಾಡ:

ಜಿಲ್ಲಾಡಳಿತವು ಜಿಪಂ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನ ಮತ್ತು ಸರಸ ಮೇಳವನ್ನು ಡಿ. 13ರಿಂದ 15ರ ವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ ವತಿಯಿಂದ 50 ಮಾರಾಟ ಮಳಿಗೆ ಸ್ಥಾಪಿಸಲಾಗಿದೆ. ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳೆಯರು ವಿವಿಧ ವಸ್ತುಗಳ ಖಾದ್ಯಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವರು. ಇದರಿಂದ ಸ್ವ-ಸಹಾಯ ಸಂಘದ ಮಹಿಳೆಯರ ಆರ್ಥಿಕಮಟ್ಟ ಸುಧಾರಣೆಗೆ ಅನುಕೂಲವಾಗುತ್ತದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ, ತೋಟಗಾರಿಕೆ ಹಾಗೂ ಕೃಷಿಯಲ್ಲಿನ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುವುದು ಮತ್ತು ವಿವಿಧ ತೋಟಗಾರಿಕೆ ಬೆಳೆಗಳ ಹೊಸ ತಳಿಗಳ ಪರಿಚಯ ಹಾಗೂ ಉದ್ಯಾನವನ ಪ್ರಿಯರಿಗೆ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಗಿಡಗಳ ಪರಿಚಯ, ಕೈ ತೋಟ ಹಾಗೂ ಮೇಲ್ಚಾವಣಿ ತೋಟ ಮಾಡುವ ಕುರಿತು ಮಾಹಿತಿಯನ್ನು ಸಹ ಈ ವೇಳೆ ನೀಡಲಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ. ಸಿ. ಭದ್ರಣ್ಣವರ ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ಕೇಂದ್ರ ಬಿಂದುವಾಗಿ ಹೂವಿನಿಂದ ಅಲಂಕೃತವಾದ ಶ್ರೀಸಿದ್ಧಾರೂಢರ ಕೈಲಾಸ ಮಂಟಪ, ಸಾಲುಮರದ ತಿಮ್ಮಕ್ಕನ ಕಲಾಕೃತಿ, ಸೆಲ್ಫಿ ಪಾಯಿಂಟ್ ಕಲಾಕೃತಿ ಹಾಗೂ ವಿವಿಧ 15ರಿಂದ 20 ಜಾತಿಯ ವಾರ್ಷಿಕ ಹೂವಿನ ತಳಿಗಳನ್ನು ಗುಚ್ಛಗಳ ಮಾದರಿಯಲ್ಲಿ ಮಾಡಲಾಗುತ್ತದೆ. ಲ್ಯಾಂಡ್ ಸ್ಕೇಪ್ ಡಿಸೈನ್ ನಿರ್ಮಾಣ, ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ, ವಿವಿಧ ಎಕ್ಸೋಟಿಕ್ ಜಾತಿಗಳ ಕಟ್ ಫ್ಲವರ್ ಜೋಡಣೆ, ವಿವಿಧ ಜಾತಿಗಳ ತರಕಾರಿಗಳ ಜೋಡಣೆ ಹಾಗೂ ವಿವಿಧ ಕಾಲಾಕೃತಿಯಲ್ಲಿ ವಸ್ತುಗಳ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಪರ್ಯಾಯ ಇಂಧನ ಮೂಲವಾಗಿ ಸೌರಶಕ್ತಿ, ಬಳಕೆಯ ಬಗ್ಗೆ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ಸಲಕರಣೆ, ಸ್ಮಾರ್ಟ್‌ ಆ್ಯಪ್‌ ಮತ್ತು ಉದ್ಯಮಿಗಳಿಗೆ ತಮ್ಮ ಉತ್ಪನ್ನ ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ. ಯಾಂತ್ರೀಕರಣ ಮತ್ತು ನೀರಾವರಿ ಸೌಲಭ್ಯಗಳ ಕುರಿತಂತೆ ಮಾದರಿ ಪ್ರಾತ್ಯಕ್ಷಿಕೆ ಹಾಗೂ ಯಂತ್ರೋಪಕರಣ ಪ್ರದರ್ಶಿಸಲಾಗುವುದು ಮತ್ತು ಮಳಿಗೆಗಳಲ್ಲಿ ನೆಲಮೂಲ ತಳಿಗಳ ಬೀಜ ಪ್ರದರ್ಶನ, ಸಿರಿಧಾನ್ಯ ಮತ್ತು ಅವುಗಳ ಉತ್ಪನ್ನ, ಸಾವಯವ ಆಹಾರ ಸಾಮಗ್ರಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು ಎಂದು ಹೇಳಿದರು.