ಸಾರಾಂಶ
- ಹೊನ್ನಾಳಿಯಲ್ಲಿ ತಾಲೂಕು ಸೌಧ ಬಳಿ 2ನೇ ಹಂತದ ಧರಣಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗ್ರಾಮ ಆಡಳಿತಾಧಿಕಾರಿಗಳ ಸುಮಾರು 23 ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಈಡೇರಿಸಬೇಕು. ಈ ನಿಟ್ಟಿನಲ್ಲಿ ಮೊದಲ ಮುಷ್ಕರ ವೇಳೆ ನೀಡಿದ್ದ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಈಗ ಎರಡನೇ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಅಧ್ಯಕ್ಷ ದೊಡ್ಡೇಶ್ ಹೇಳಿದರು.ಪಟ್ಟಣದ ತಾಲೂಕು ಸೌಧ ಮುಂಭಾಗದಲ್ಲಿ ಸೋಮವಾರ ಎರಡನೇ ಹಂತದ ಧರಣಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅ,10ರಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದು ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿತ್ತು. ಇದರಿಂದಾಗಿ ಮೊದಲನೇ ಹಂತ ಮುಷ್ಕರ ಹಿಂಪಡೆಯಲಾಗಿತ್ತು, ಆದರೆ, ಈವರೆವಿಗೂ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಆದ್ದರಿಂದ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ಆದೇಶದಂತೆ ಈಗ ಮತ್ತೆ ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಅನಿರ್ದಿಷ್ಟಾವಧಿಗೆ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವರೆವಿಗೂ ಇಲ್ಲಿಂದ ಕದಲುವುದಿಲ್ಲ. ಬಹುಮುಖ್ಯವಾಗಿ ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆ ಅತ್ಯಂತ ಕಿರಿಕಿರಿಯಾಗಿದೆ. ಇದರಲ್ಲಿ ಪತ್ತೆಯಾಗಿರುವ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರಿಗೆ ಪೌತಿ ಖಾತೆ ಬದಲಿಸುವ ಕಾರ್ಯದಿಂದ ನಮ್ಮನ್ನು ಕೈಬಿಡಬೇಕು. ಅಂತರ ಜಿಲ್ಲಾ ವರ್ಗಾವಣೆಯ ಕೆಸಿಎಸ್ಆರ್ ನಿಯಮ 16ಎ ರ ಉಪಖಂಡ (2)ನ್ನು ಮರುಸ್ಥಾಪಿಸುವ ಬಗ್ಗೆ ಮಾರ್ಗಸೂಚಿ ರಚಿಸಬೇಕು. ಸರ್ಕಾರ ಕೂಡಲೇ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ, ಬೇಡಿಕೆಗಳನ್ನು ಈಡೇರಿಸಬೇಕು. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಹಸೀಲ್ದಾರ್ ಪಟ್ಟರಾಜಗೌಡ ಸಂಘದ ಮನವಿ ಸ್ವೀಕರಿಸಿದರು. ಉಪಾಧ್ಯಕ್ಷ ಅಶೋಕ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಉಮೇಶ್, ಖಜಾಂಚಿ ಸಂತೋಷಕುಮಾರ್, ಧರ್ಮಪ್ಪ, ಬಸವರಾಜು, ಪ್ರಶಾಂತ, ಬಸವರಾಜು, ಶಿಲ್ಪ, ಅಶ್ವಿನಿ, ರೇಣುಕಾ, ಅನಿತಾ, ಉಮೇಶ, ಮಂಜಪ್ಪ, ಭರಮಪ್ಪ, ನಾಗರಾಜು, ಸುರೇಶ್ ಮತ್ತಿತರರು ಇದ್ದರು.
- - - -10ಎಚ್.ಎಲ್.ಐ3.ಜೆಪಿಜಿ:ಹೊನ್ನಾಳಿ ತಾಲೂಕು ಸೌಧ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸಿ, ಶೀಘ್ರ ಬೇಡಿಕೆಗಳ ಈಡೇರಿಸಲು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.