ಸಾರಾಂಶ
ಮಂಗಳವಾರ ಸಂಜೆ ಹೂವಿನಹಡಗಲಿ ಪಟ್ಟಣದ ರಂಗಭಾರತಿ ಹತ್ತಿರದ ಎಂ.ಪಿ. ಪ್ರಕಾಶ ಸಮಾಧಿ ಬಳಿ ಅಂತ್ಯಕ್ರಿಯೆ ನೆರವೇರಿತು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ ಅವರ ಪತ್ನಿ ಎಂ.ಪಿ. ರುದ್ರಾಂಬಾ ಸೋಮವಾರ ರಾತ್ರಿ ನಿಧನರಾಗಿದ್ದು, ಮಂಗಳವಾರ ಸಂಜೆ ಪಟ್ಟಣದ ರಂಗಭಾರತಿ ಹತ್ತಿರದ ಎಂ.ಪಿ. ಪ್ರಕಾಶ ಸಮಾಧಿ ಬಳಿ ಅಂತ್ಯಕ್ರಿಯೆ ನೆರವೇರಿತು.ಬೆಳಗ್ಗೆಯಿಂದ ಎಂ.ಪಿ. ಪ್ರಕಾಶರ ತೋಟದ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕ್ರಪ್ಪ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಶಾಸಕರಾದ ಎಚ್.ಆರ್. ಗವಿಯಪ್ಪ, ಇ. ತುಕಾರಾಂ, ಕೃಷ್ಣ ನಾಯ್ಕ, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ, ಸಹಕಾರಿ ಧುರೀಣ, ಮುಂಡರಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರ ಮಠ, ಅಮರೇಗೌಡ ಭಯ್ಯಾಪುರ, ಪಿ.ಟಿ. ಪರಮೇಶ್ವರ ನಾಯ್ಕ, ಬಿ.ಚಂದ್ರನಾಯ್ಕ, ನಂದಿಹಳ್ಳಿ ಹಾಲಪ್ಪ, ಮಾಜಿ ಸಚಿವ ಬಿ. ಶ್ರೀರಾಮುಲು, ಎಸ್. ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಹಾಗೂ ಹರಗುರು ಚರಮೂರ್ತಿಗಳು ಅಂತಿಮ ದರ್ಶನ ಪಡೆದರು. ಅವರ ಪುತ್ರಿ ಶಾಸಕಿ ಎಂ.ಪಿ. ಲತಾ ಇದ್ದರು
ರುದ್ರಾಂಬಾ ಅವರ ಅಂತಿಮ ಯಾತ್ರೆಯು ಪಟ್ಟಣದ ವಿವಿಧ ರಸ್ತೆಗಳ ಮೂಲಕ ತೆರಳಿ, ರಂಗಭಾರತಿ ಬಳಿ ಇರುವ ಎಂ.ಪಿ. ಪ್ರಕಾಶರ ಸಮಾಧಿ ಬಳಿ ಅಂತ್ಯಸಂಸ್ಕಾರ ಮಾಡಲಾಯಿತು.