ಸಾಳ್ವ, ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ: ಡಾ. ಡಿ.ವಿ. ಪರಮಶಿವಮೂರ್ತಿ

| Published : Mar 03 2025, 01:46 AM IST

ಸಾಳ್ವ, ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ: ಡಾ. ಡಿ.ವಿ. ಪರಮಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಅವನತಿ ಕುರಿತು ಇತಿಹಾಸಕಾರರಲ್ಲಿ ಸ್ಪಷ್ಟತೆ ಮೂಡಲು ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವ ಅಗತ್ಯವಿದೆ.

ವಿಜಯನಗರ ಕುರಿತ ವಿಚಾರ ಸಂಕಿರಣ । ಕನ್ನಡ ವಿಶ್ವವಿದ್ಯಾಲಯ ಕುಲಪತಿ ಅಭಿಮತಕನ್ನಡಪ್ರಭ ವಾರ್ತೆ ಹಂಪಿ

ವಿಜಯನಗರ ಸಾಮ್ರಾಜ್ಯದ ಅವನತಿ ಕುರಿತು ಇತಿಹಾಸಕಾರರಲ್ಲಿ ಸ್ಪಷ್ಟತೆ ಮೂಡಲು ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳೀದರು.

ಹಂಪಿ ಉತ್ಸವ-2025ರ ಅಂಗವಾಗಿ ಶನಿವಾರ ಕಮಲಾಪುರದ ಪುರಾತತ್ತ್ವ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾದ ವಿಜಯನಗರ ಅಧ್ಯಯನ ಕುರಿತು 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ತುಳು, ಸಾಳ್ವ ಹಾಗೂ ಅರವೀಡು ವಂಶಗಳು ಆಳ್ವಿಕೆ ಮಾಡಿವೆ. ಇದುವರೆಗೂ ಸಂಗಮ ಹಾಗೂ ತುಳು ವಂಶಗಳ ಅರಸರ ಕೊಡುಗೆ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿವೆ. ಆದರೆ ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ವ್ಯಾಪಕ ಅಧ್ಯಯನಗಳು ನಡೆದಿಲ್ಲ. ವಿಜಯನಗರ ಕುರಿತು ಈವರೆಗೂ ನಡೆದ ಸಂಶೋಧನೆಗಳ ಪುನರ್ ಅಧ್ಯಯದ ಅವಶ್ಯಕತೆಯಿದೆ. ವಸ್ತುನಿಷ್ಠ, ಬಹುತ್ವ ಹಾಗೂ ವಿಶಾಲ ದೃಷ್ಟಿಕೋನದಿಂದ ಅಧ್ಯಯನವಾಗಬೇಕಿದೆ ಎಂದರು.

ಇತಿಹಾಸಕಾರರು ಅರವೀಡು ವಂಶದ ಆಡಳಿತಾಗರರ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅರವೀಡು ವಂಶಜರು ಆಂಧ್ರಪ್ರದೇಶದ ಕರ್ನೂಲು ಮೂಲದವರು, ಇವರ ಆಡಳಿತ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಂಚಿಕೆ ಆಗಿತ್ತು. ರಕ್ಕಸತಂಗಡಿ ಯುದ್ಧದಲ್ಲಿ ಸಾಮ್ರಾಜ್ಯ ರಕ್ಷಣೆಗಿಂತ ತಮ್ಮ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆ ಪ್ರಾಮುಖ್ಯತೆ ನೀಡಿದರು ಎಂಬ ಭಾವನೆಯಿದೆ. ಅರವೀಡು ವಂಶದ ಅಧ್ಯಯನಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಹಿತ್ಯ ಹಾಗೂ ಐತಿಹ್ಯಗಳನ್ನು ಒಗ್ಗೂಡಿಸಿ ಸಂಶೋಧನೆ ಮಾಡಬೇಕಿದೆ. ಇದು ಬಹುಭಾಷೆಯ ಜ್ಞಾನ ಇಲ್ಲದ ಇತಿಹಾಸಕಾರಿಗೆ ತೊಡಕಾಗಿ ಪರಿಣಮಿಸಿದೆ ಎಂದರು.

ತಾತಪಿನ್ನಮ, ಸೋಮಿದೇವ, ರಾಘವದೇವ, 2ನೇ ಪಿನ್ನಮ, ಅರವೀಡು ಬುಕ್ಕ, ಅರವೀಡು ರಾಮರಾಜ, ಶ್ರೀರಂಗರಾಜ, ತಿರುಮಲ ಹಾಗೂ ಅಳಿಯ ರಾಮರಾಯ ಅರವೀಡು ವಂಶಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ತಿರುಮಲ, ಕೃಷ್ಣ ದೇವರಾಯನ ಅಳಿಯನಾಗಿದ್ದು, ರಕ್ಕಸತಂಗಡಿ ಯುದ್ಧದ ಬಳಿಕ ಹರಿದು ಹೊಂಚಿಹೋದ ಪ್ರದೇಶಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ. ಸಾಮ್ರಾಜ್ಯ ವಿಸ್ತರಣೆ ಮಾಡಿದ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರೊ. ಎಂ.ವಿ. ಶ್ರೀನಿವಾಸ್, ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಸೇರಿದಂತೆ ಹತ್ತಾರು ಸಾಮ್ರಾಜ್ಯಗಳು ಕರ್ನಾಟಕದಲ್ಲಿ ಆಳ್ವಿಕೆ ನಡೆಸಿವೆ. ಆದರೆ ವಿಜಯನಗರ ಸಾಮ್ಯಾಜ್ಯದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿವೆ. ರೋಮ್ ಸಾಮ್ರಾಜ್ಯದ ಹೊರತಾಗಿ ವಿಶ್ವದಲ್ಲೇ ಅತಿ ಹೆಚ್ಚು ಸಂಶೋಧನೆಗಳು ವಿಜಯನಗರ ಸಾಮ್ರಾಜ್ಯದ ಕುರಿತಾಗಿ ಇವೆ ಎಂಬುದಾಗಿ ಹೇಳಿದರು.

ಭೌಗೋಳಿಕ, ಭಾಷೆ, ಸೈದ್ಧಾಂತಿಕ ಹಿನ್ನೆಲೆ ವಿಜಯನಗರ ಸಾಮ್ರಾಜ್ಯದ ಕುರಿತು ಅಧ್ಯಯನಗಳು ನಡೆದಿವೆ. ಆರಂಭದ ಅಧ್ಯಯನಗಳಲ್ಲಿ ಮುಸ್ಲಿಂ ಆಡಳಿತ ವಿರೋಧಿಯಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾಯಿತು ಎನ್ನುವ ಸೈದ್ದಾಂತಿಕ ವಾದ ಪ್ರಚಲಿತದಲ್ಲಿತ್ತು. ಶ್ರೀಕೃಷ್ಣದೇವರಾಯ ಸೇರಿದಂತೆ ಹಲವು ಅರಸರ ಸರ್ವಧರ್ಮ ಸಹಿಷ್ಣು ಮನೋಭಾವ ಇತಿಹಾಸದಲ್ಲಿ ದಾಖಲೆ ರೂಪದಲ್ಲಿ ಉಳಿದಿವೆ ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಇಂದಿನ ಮಕ್ಕಳು ಕೃತಕ ಬುದ್ದಿಮತ್ತೆ ಯುಗದಲ್ಲಿ ಕಳೆದು ಹೋಗುತ್ತಿದ್ದಾರೆ. ಇವರಿಗೆ ಇತಿಹಾಸ ಪರಿಚಯವಾಗಬೇಕು. ಇದುವರೆಗೂ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿದ ವಿಚಾರ ಸಂಕಿರಣಗಳ ಸಂಶೋಧನೆಯ ಶೇ.10ರಷ್ಟು ಸಾರ ಜನರಿಗೆ ತಲುಪಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇತಿಹಾಸ ಜ್ಞಾನ ಇಂದು ನಶಿಸಿ ಹೋಗುತ್ತಿದೆ. ಕ್ಷೇತ್ರದಲ್ಲಿ 120 ಸರ್ಕಾರಿ ಶಾಲೆಗಳು ಇವೆ. ಈ ಮಕ್ಕಳಿಗೆ ಪುರಾತತ್ತ್ವ ಇಲಾಖೆಯಿಂದ ಇತಿಹಾಸ ಕುರಿತು ಸಂವಾದಗಳು, ವಿಚಾರ ಸಂಕಿರಣ, ಕ್ಷೇತ್ರ ಭೇಟಿ ಏರ್ಪಡಿಸಬೇಕು. ಶಾಸಕರ ಅನುದಾನದಲ್ಲಿ ಮಕ್ಕಳಿಗೆ ಬಸ್ ಹಾಗೂ ಊಟದ ಸೌಲಭ್ಯ ನೀಡುತ್ತೇನೆ. ಪುರಾತತ್ತ್ವ ಇಲಾಖೆ ವಿಜಯನಗರ ಸಾಮ್ರಾಜ್ಯದ ಜ್ಞಾನವನ್ನು ಮಕ್ಕಳಿಗೆ ಹಂಚುವ ಕೆಲಸ ಮಾಡಬೇಕು ಎಂದರು.

ಪುರಾತತ್ತ್ವ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಕಮಲಾಪುರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ, ಪುರಾತತ್ವ ಇಲಾಖೆ ಉಪನಿರ್ದೇಶಕಿ ಕಾವ್ಯಶ್ರೀ, ತಹಸೀಲ್ದಾರ್ ಶೃತಿ ಎಂ.ಎಂ., ಪುರಾತತ್ವ ಸಹಾಯಕ ಡಾ. ಆರ್. ಮಂಜ ನಾಯ್ಕ ಸೇರಿದಂತೆ ಮತ್ತಿರರಿದ್ದರು. ಸುಮಾರು 61 ವಿದ್ವಾಂಸರು 6 ಗೋಷ್ಠಿಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದರು. ಇದೇ ವೇಳೆ ಪ್ರವಾಸಿ ಮಿತ್ರರಿಗೆ ಸಮವಸ್ತ್ರ ವಿತರಿಸಲಾಯಿತು.