ಸಾರಾಂಶ
ಗದಗ: ಜಲಶಕ್ತಿ ಅಭಿಯಾನದ ಅಂಗವಾಗಿ ಜಲಸಂಚಯ ಜನಭಾಗಿದಾರಿ 1.0 ಕಾರ್ಯಕ್ರಮದಡಿ ಜಿಲ್ಲೆಯು ಜಲಸಂರಕ್ಷಣೆ ಅಡಿಯಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಂಸೆಗೆ ಪಾತ್ರವಾಗಿದೆ.
ದೇಶದ 780 ಜಿಲ್ಲೆಗಳಲ್ಲಿ ಜೋನ್ 3, ಕೆಟಗರಿ 3ರಲ್ಲಿ 4ನೇ ಸ್ಥಾನ ಪಡೆದು, ₹25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ. ಈ ಗೌರವವು ಜಿಲ್ಲೆಯ ಜನಸಾಮಾನ್ಯ, ಸರ್ಕಾರಿ ಸಂಸ್ಥೆಗಳು ಮತ್ತು ಎನ್ಜಿಒಗಳ ಒಗ್ಗಟ್ಟಿನ ಶಕ್ತಿಯ ಸಾಕ್ಷಿಯಾಗಿದೆ.ಜಲಸಂಚಯ ಎಂದರೇನು?: "ನೀರಿಗಾಗಿ ಒಂದಾಗಿ ಪ್ರತಿ ಹನಿ ನೀರನ್ನು ಸಂರಕ್ಷಿಸಿ " ಎಂಬ ಧ್ಯೇಯದೊಂದಿಗೆ ಜಲಸಂಚಯ ಜನಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ಸ್ಥಳೀಯ ಸಮುದಾಯ, ಸರ್ಕಾರಿ ಸಂಸ್ಥೆಗಳು ಮತ್ತು ಎನ್ಜಿಒಗಳ ಸಹಯೋಗದಿಂದ ಈ ಕಾರ್ಯಕ್ರಮವು ನೀರಿನ ಕೊರತೆಯ ಸವಾಲಿಗೆ ಸಮರ್ಥ ಪರಿಹಾರ ಹುಡುಕುವುದಾಗಿದೆ.ಜಲಕ್ರಾಂತಿ ಕೊಡುಗೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸೇರಿದಂತೆ ಇತರ ಯೋಜನೆಗಳಡಿ ಜಿಲ್ಲೆಯು 2024ರ ಏ. 1ರಿಂದ 2025ರ ಮಾ. 31ರ ವರೆಗೆ 11,971 ಜಲಸಂರಕ್ಷಣೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿ, ಜಲಸಂಚಯ ಪೋರ್ಟಲ್ನಲ್ಲಿ ದಾಖಲಿಸಿದ್ದು, ಇವುಗಳಲ್ಲಿ 11,329 ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣಗಳು, 75 ಬೋರ್ವೆಲ್ ರೀಚಾರ್ಜ್ಗಳು, 60 ಸೋಕ್ಪಿಟ್ಗಳು, 465 ಮಳೆನೀರು ಕೊಯ್ಲು ಕಾಮಗಾರಿಗಳು, 10 ಚೆಕ್ ಡ್ಯಾಂಗಳು ಮತ್ತು 32 ಗಲ್ಲಿ ಪ್ಲಗ್ (ಚೆಕ್ ಡ್ಯಾಂ)ಗಳು ಸೇರಿವೆ. ಈ ಕಾಮಗಾರಿಗಳು ಜಿಲ್ಲೆಯ ಜಲ ಸಂರಕ್ಷಣೆಯ ಚಿತ್ರಣವನ್ನೇ ಬದಲಾಯಿಸಿವೆ.
ಮನ್ನಣೆ ಪಡೆದ ಜಿಪಂ: ಕೇಂದ್ರ ನೋಡಲ್ ಆಫೀಸರ್ ತಂಡವು 2025ರ ಜೂ. 16ರಿಂದ 2025ರ ಜೂ. 21ರ ವರೆಗೆ ಜಿಲ್ಲೆಯ ಹಲವೆಡೆ ಸ್ಥಳ ಪರಿಶೀಲಿಸಿ ಕಾಮಗಾರಿಗಳ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು. ಶೇ. 99ರಷ್ಟು ಡೆಸ್ಕ್ಟಾಪ್ ಮೌಲ್ಯ ಮಾಪನದಲ್ಲಿಯೂ ಈ ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿವೆ ಎಂದು ದಾಖಲಾಗಿದೆ. ಈ ಸಾಧನೆಯು ಗದಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮೊದಲ ಸ್ಥಾನಕ್ಕೆ ಒಯ್ಯುವುದು ಮಾತ್ರವಲ್ಲದೆ, ದೇಶದಲ್ಲಿ ಜೋನ್ 3, ಕೆಟಗರಿ 3ರಲ್ಲಿ 4ನೇ ಸ್ಥಾನ ಗಳಿಸುವಂತೆ ಮಾಡಿದೆ.ಕೇಂದ್ರ ಸರ್ಕಾರದಿಂದ ಘೋಷಿತವಾದ ₹25 ಲಕ್ಷ ಬಹುಮಾನವು ಗದಗ ಜಿಲ್ಲೆಯ ಜಲಯಾತ್ರೆಗೆ ಹೊಸ ಉತ್ಸಾಹ ತುಂಬಿದೆ. ಸಾಧನೆಯು ಜಿಲ್ಲೆಯನ್ನು ಜಲ ಸಂರಕ್ಷಣೆಯಲ್ಲಿ ರಾಷ್ಟ್ರಮಟ್ಟದ ಗಮನಕ್ಕೆ ತಂದಿದೆ. ಜತೆಗೆ ಭವಿಷ್ಯದಲ್ಲಿ ಇನ್ನಷ್ಟು ಕಾಮಗಾರಿಗಳಿಗೆ ಪ್ರೇರಣೆಯಾಗಿದೆ.
ಪ್ರಶಂಸೆ: ಜಲಸಂಚಯ ಜನಭಾಗಿದಾರಿ ಅಭಿಯಾನದಲ್ಲಿ ರಾಜ್ಯದಲ್ಲೇ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ. ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆ ಕುರಿತು ಜಿಲ್ಲೆಯ ಅಧಿಕಾರಿಗಳು ಶ್ರಮವಹಿಸಿ ಹಲವು ಕಾಮಗಾರಿಗಳನ್ನು ಅನುಷ್ಠಾನ ಮಾಡಿರುವುದು ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ಪ್ರೋತ್ಸಾಹಕ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಬದು ನಿರ್ಮಾಣ ಕಾಮಗಾರಿ, ಚೆಕ್ ಡ್ಯಾಂ ನಿರ್ಮಾಣ, ಬೋರವೆಲ್ ರೀಚಾರ್ಜ್ ಕಾಮಗಾರಿ ಸೇರಿದಂತೆ ಹಲವು ಪರಿಸರಸ್ನೇಹಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅನುಷ್ಠಾನ ಮಾಡಲಾದ ಎಲ್ಲ ಕಾಮಗಾರಿಗಳನ್ನು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪರಿಶೀಲನೆ ಸಂದರ್ಭದಲ್ಲಿ ಕೇಂದ್ರ ತಂಡ ಜಿಲ್ಲೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಗದಗ ಜಿಲ್ಲೆಗೆ ಈ ಅಭಿಯಾನದಡಿ ಪ್ರಥಮ ಸ್ಥಾನ ದೊರಕಿರುವುದು ನಮಗೆ ಮತ್ತಷ್ಟು ಕಾಮಗಾರಿಗಳನ್ನು ಅನುಷ್ಠಾನಿಸಲು ಪ್ರೋತ್ಸಾಹಕವಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿದರು.ಪೋರ್ಟಲ್ನಲ್ಲಿ ಅಪ್ಲೋಡ್: ಜಿಲ್ಲೆಯ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ 11971 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಯ ಜನಭಾಗಿದಾರಿ 1.0 ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಿಸಿರುವುದರಿಂದಲೇ ಈ ಪ್ರಶಸ್ತಿ ಬಂದಿದೆ ಎಂದು ಜಿಪಂ ಮನರೇಗಾ ವಿಭಾಗದ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣಕುಮಾರ್ ಎಸ್.ಎಚ್. ತಿಳಿಸಿದರು.