ಗದುಗಿನ ಮಹಾಭಾರತ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆ

| Published : Jul 03 2024, 12:16 AM IST

ಸಾರಾಂಶ

ಕುಮಾರವ್ಯಾಸರ ಜೀವನದ ಅಧ್ಯಯನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಆಸಕ್ತಿ, ಉಲ್ಲಾಸ ಹಾಗೂ ಶಿಸ್ತಿನೊಂದಿಗೆ ಗುರಿ ಸಾಧನೆಗೆ ಪ್ರೇರಣೆಯಾಗಬಹುದು

ಗದಗ: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ಯುಂಗದ ಶಿಖರದಲ್ಲಿ ಇರುವಂತೆ ಮಾಡಿದ ಕವಿಗಳ ಸಾಲಿನಲ್ಲಿ ಸೇರುವ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಬಿರುದುಗಳಿಸಿದ ಕುಮಾರವ್ಯಾಸರು ಈ ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಳಿತು ಬರೆದ ಗದುಗಿನ ಮಹಾಭಾರತ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ ಎಂದು ಪ್ರೋ. ಗಣೇಶ ಚಲವಾದಿ ಹೇಳಿದರು.

ಅವರು ವಿಜಯ ವಾಣಿಜ್ಯ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ನಗರದ ವೀರನಾರಾಯಣ ದೇವಸ್ಥಾನದ ಐತಿಹಾಸಿಕತೆಯ ಬಗ್ಗೆ ದೇವಾಲಯಕ್ಕೆ ಭೇಟಿ ನೀಡಿದಾಗ ಇತಿಹಾಸ ಪರಿಚಯಿಸಿ ಮಾತನಾಡಿದರು.

ಗದುಗಿನ ವೀರನಾರಾಯಣ ದೇವಸ್ಥಾನವು ಕ್ರಿಶ 1117 ಸುಮಾರಿನಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಕಟ್ಟಿಸಿದ್ದು, ಈ ದೇವಸ್ಥಾನವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಸುರಕ್ಷಿತ ಸ್ಮಾರಕವಾಗಿದೆ ಎಂದರು.

ಕುಮಾರವ್ಯಾಸರು ಈಗಿನ ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ನಾರಾಯಣಪ್ಪನವರು ಕುಮಾರವ್ಯಾಸ ಎಂಬ ಹೆಸರಿನಿಂದ ಪರಿಚಿತರಾದವರು ಕನ್ನಡ ಭಾಷೆಯಲ್ಲಿ 15ನೇ ಶತಮಾನದ ಆರಂಭದ ಪ್ರಭಾವಿ ಮತ್ತು ಶಾಸ್ತ್ರೀಯ ವೈಷ್ಣವ ಕವಿ ಕಾವ್ಯನಾಮವು ಕನ್ನಡದಲ್ಲಿ ಮಹಾಭಾರತದ ನಿರೂಪಣೆಯ ಶ್ರೇಷ್ಠ ಕೃತಿಗೆ ಗೌರವವಾಗಿದೆ, ಕುಮಾರವ್ಯಾಸ ಎಂದರೆ ಪುಟ್ಟವ್ಯಾಸ ಎಂದರ್ಥ. ಕುಮಾರವ್ಯಾಸನ ಅತ್ಯಂತ ಪ್ರಸಿದ್ಧ ಕೃತಿ, ಕರ್ಣಾಟ ಭಾರತ ಕಥಾಮಂಜರಿ ಗದುಗಿನ ಭಾರತ ಮತ್ತು ಕುಮಾರವ್ಯಾಸ ಭಾರತವೆಂದೆ ಪ್ರಸಿದ್ಧವಾಗಿದೆ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳ(ಅಧ್ಯಾಯಗಳು) ರೂಪಾಂತರವಾಗಿದೆ. ಗದುಗಿನ ಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ಇದು ಆರು ಸಾಲಿನ ಚರಣಗಳ ರೂಪಕವಾಗಿದೆ ಎಂದರು.

ಕುಮಾರವ್ಯಾಸರ ಜೀವನದ ಅಧ್ಯಯನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಆಸಕ್ತಿ, ಉಲ್ಲಾಸ ಹಾಗೂ ಶಿಸ್ತಿನೊಂದಿಗೆ ಗುರಿ ಸಾಧನೆಗೆ ಪ್ರೇರಣೆಯಾಗಬಹುದು ಎಂಬ ವಿಚಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೋ. ಶ್ರೀದೇವಿ.ವಿ.ವೈ., ಪ್ರೋ.ವಿಶಾಲಾಕ್ಷಿ ಮೂಲಿಮನಿ ಹಾಗೂ ಅರುಣ ಹುಲ್ಲೂರು, ವಿದ್ಯಾರ್ಥಿಗಳು ಇದ್ದರು.