ಸಾರಾಂಶ
ಸಿಂಧನೂರಿನ ಪ್ರಶಾಂತ್ ನಗರದಲ್ಲಿರುವ ಓಂ ಸಾಯಿ ಗಜಾನನ ಯುವಕ ಮಂಡಳಿಯವರು ನಡೆಸಿದ ಗಣೇಶ ವಿಸರ್ಜನೆಯ ಅದ್ಧೂರಿ ಮೆರವಣಿಗೆಯಲ್ಲಿ ಗಣ್ಯರು ಮುಖಂಡರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸ್ಥಳೀಯ ಪ್ರಶಾಂತನಗರದಲ್ಲಿ ಓಂ ಸಾಯಿ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು 9ನೇ ದಿನವಾದ ಭಾನುವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ಮಾಜಿ ಸಚಿವ ಅರವಿಂದ್ ಬೆಲ್ಲದ್, ಹಾಗೂ ಮಂಡಳಿ ಅಧ್ಯಕ್ಷ ಚೇತನ್ ಗೌಡ ಸೇರಿ ಇತರರು ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನಂತರ ಮಹಾರಾಷ್ಟ್ರದ ನಾಸಿಕನ ಶಿವ ತಾಂಡವ ತಂಡದ 95 ಜನ ಯುವಕ ಯುವತಿಯರು ಡೋಲು ಬಾರಿಸು ವಾದ್ಯದೊಂದಿಗೆ ಸಾಗಿದ ಮೆರವಣಿಗೆಯು ನೋಡುಗರ ಕಣ್ಮನ ಸೆಳೆಯಿತು. ಮೆರವಣಿಗೆ ಡೋಲು ವಾದ್ಯ ಮೆರಗು ತಂದಿತು. ಮಹಾತ್ಮ ಗಾಂಧಿ ವೃತ್ತ, ಶಹರ ಪೊಲೀಸ್ ಠಾಣೆ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಪುನಃ ಗಾಂಧಿ ವೃತ್ತದ ಮೂಲಕ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ಬಾಬು ಜಗಜೀವನರಾಂ ವೃತ್ತ ಹಾಗೂ ಕುಷ್ಟಗಿ ರಸ್ತೆಯ ಮೂಲಕ ತಾಲೂಕಿನ ತುರ್ವಿಹಾಳ ಪಟ್ಟಣದ ಎಡದಂಡೆ ಮುಖ್ಯಕಾಲುವೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಣಪತಿ ವಿಸರ್ಜನೆ ಮಾಡಲಾಯಿತು.ವಿಶೇಷವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮಹಾರಾಷ್ಟ್ರದ ನಾಸಿಕ ಶಿವ ತಾಂಡವ ತಂಡದ ಡೋಲು ನೃತ್ಯವು ಸಹಸ್ರಾರು ಜನರನ್ನು ರೋಮಾಂಚನ ಮೂಡಿಸಿ ಆಕರ್ಷಿಸಿತು. ನೋಡುಗರೆಲ್ಲರೂ ಡೋಲು ನೃತ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಫೋಟೋ, ವಿಡಿಯೋಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ತಾ.ಪಂ ವಾಣಿಜ್ಯ ಮಳಿಗೆ, ಫೋಟೋ ಸ್ಟುಡಿಯೋಗಳ ಮೇಲೆ ನಿಂತು ನೃತ್ಯವನ್ನು ವೀಕ್ಷಿಸಿದರು.