ಗಾಂಧಿ ಪ್ರಣಿತ ಭಾರತವೇ ನಮ್ಮ ಆದ್ಯತೆ: ಸಚಿವ ಲಾಡ್‌

| Published : Oct 03 2024, 01:31 AM IST

ಗಾಂಧಿ ಪ್ರಣಿತ ಭಾರತವೇ ನಮ್ಮ ಆದ್ಯತೆ: ಸಚಿವ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿ ತಮ್ಮ ತತ್ವ-ಸಿದ್ಧಾಂತಗಳ ಮೂಲಕ ವಿಶ್ವದ ಅನೇಕ ರಾಷ್ಟ್ರಗಳಿಗೆ ಆದರ್ಶವಾಗುವಂತಹ ಆಡಳಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರ ರಾಜಕೀಯ ಪ್ರವೇಶ ಭಾರತ ಸ್ವಾತಂತ್ರ‍್ಯ ಚಳವಳಿಯ ದಿಕ್ಕನ್ನೇ ಬದಲಿಸಿತು.

ಧಾರವಾಡ:

ಮಹಾತ್ಮ ಗಾಂಧಿ ನೀಡಿರುವ ಸತ್ಯ, ಅಹಿಂಸೆ ಆಧಾರಿತ ಗಾಂಧಿ ಪ್ರಣಿತ ಭಾರತವೇ ನಮ್ಮ ಆದ್ಯತೆಯಾಗಿದ್ದು ಅವರ ಜೀವನ ಮೌಲ್ಯಗಳು ನಮಗೆ ದಾರಿದೀಪ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 155ನೇ ಜಯಂತಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಜನ್ಮ ದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿ ಮಾತನಾಡಿದರು.

ಗಾಂಧೀಜಿ ತಮ್ಮ ತತ್ವ-ಸಿದ್ಧಾಂತಗಳ ಮೂಲಕ ವಿಶ್ವದ ಅನೇಕ ರಾಷ್ಟ್ರಗಳಿಗೆ ಆದರ್ಶವಾಗುವಂತಹ ಆಡಳಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರ ರಾಜಕೀಯ ಪ್ರವೇಶ ಭಾರತ ಸ್ವಾತಂತ್ರ‍್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. ಅವರ ವ್ಯಕ್ತಿತ್ವ, ಆದರ್ಶಮಯ ಜೀವನಕ್ಕೆ ಮಾರು ಹೋದ ಅನೇಕರು ಅವರಂತೆ ನಾಡಿಗೆ ಮಡಿದರು ಎಂದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ದೇಶದ ಕೃಷಿ ಪದ್ಧತಿ, ರೈತರ ಬದುಕು ಸುಧಾರಣೆಗೆ ಕ್ರಮವಹಿಸಿದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ಬದಲಾವಣೆಗೆ ಕ್ರಮವಹಿಸಿದರು ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಭಾರತೀಯ ಆಡಳಿತ ವ್ಯವಸ್ಥೆ ಗಾಂಧೀಜಿ ಬೋಧಿಸಿದ, ಅಳವಡಿಸಿಕೊಂಡು ಆಚರಿಸಿದ ತತ್ವ-ಸಂದೇಶಗಳನ್ನು ಅನುಸರಿಸಿದೆ ಎಂದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿದರು. ಗಾಂಧಿ ಚಿಂತಕ ಡಾ. ಸಂಜೀವ್ ಕುಲಕರ್ಣಿ ಗಾಂಧೀಜಿ ಜೀವನ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಕಲಾವಿದ ರವಿ ಕುಲಕರ್ಣಿ, ಹಾಪೀಸ್ ರೆಹಮಾನ್ ಖಾದ್ರಿ, ರೆವರೆಂಡ್ ಸ್ಯಾಮುವೆಲ್ ಸಕ್ರಿ, ಮಹೇಶ್ ಭಟ್ ಹಾಜರಿದ್ದರು. ಇದೇ ವೇಳೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.ಗಾಂಧೀ ನಡಿಗೆ...

ವಾರ್ತಾ ಭವನದ ಮುಂಭಾಗದ ಗಾಂಧೀ ಪ್ರತಿಮೆಯಿಂದ ಗಾಂಧೀ ನಡಿಗೆ ಆಯೋಜಿಸಲಾಗಿತ್ತು. ಗಾಂಧೀ ನಡಿಗೆಯು ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಕೋರ್ಟ್‌ ಸರ್ಕಲ್, ಸರ್.ಎಂ. ವಿಶ್ವೇಶ್ವರಯ್ಯ ಸರ್ಕಲ್ ಮೂಲಕ ಆಲೂರ ವೆಂಕಟರಾವ್ ಭವನದ ವರೆಗೆ ಜರುಗಿತು. ಗಾಂಧೀ ನಡಿಗೆಯಲ್ಲಿ ಗಾಂಧೀಜಿ ಹಾಗೂ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದ ಶಾಲಾ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು. ಗಾಂಧೀ ನಡಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರ ನೇತೃತ್ವದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಪ್ರಶಸ್ತಿ

ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಸೆ. 14ರಿಂದ ಅ. 1ರ ವರೆಗೆ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಹಾಗೂ ಇನ್ನಿತರ ಐಇಸಿ ಕಾರ್ಯಕ್ರಮಗಳಲ್ಲಿ ಎಂಟು ಘಟಕವಾರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ ಧಾರವಾಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.