ಸಾರಾಂಶ
ಮಂಗಳೂರು ವಿವಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನೂತನ ಸಭಾಂಗಣದ ಉದ್ಘಾಟನೆ ಮತ್ತು ಡಾ.ಕೆ.ಶಿವರಾಮ ಕಾರಂತ ಜನ್ಮದಿನಾಚರಣೆ ‘ಕಾರಂತರ ನೆನಪು’ ಕಾರ್ಯಕ್ರಮ ಸಂಪನ್ನಗೊಂಡಿತು.
ಮಂಗಳೂರು ವಿವಿ: ಸಭಾಂಗಣ ಉದ್ಘಾಟನೆ, ಕಾರಂತರ ನೆನಪು ಕಾರ್ಯಕ್ರಮ
ಉಳ್ಳಾಲ: ಬಾಲ್ಯದಲ್ಲಿ ಕಾರಂತರ ಮೇಲೆ ಗಾಂಧಿ ಮಹತ್ವದ ಪ್ರಭಾವ ಬೀರಿದ್ದರು. ಗಾಂಧಿ ತತ್ವದ ಪ್ರಚಾರಕ್ಕಾಗಿ ಅವರು ದಲಿತ ಕೇರಿಗಳಿಗೆ ಹೋಗಿ ನಾಟಕ ಆಡಿ ಸ್ವಾತಂತ್ರ್ಯ ಕಲ್ಪನೆಯನ್ನು ಬಿತ್ತುತ್ತಿದ್ದರು. ಆಗ ದಲಿತ ಬದುಕನ್ನು ಹತ್ತಿರದಿಂದ ಕಂಡುದು ಚೋಮನದುಡಿ ಕಾದಂಬರಿಗೆ ಪ್ರೇರಣೆಯಾಯಿತು ಎಂದು ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.ಮಂಗಳೂರು ವಿವಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನೂತನ ಸಭಾಂಗಣದ ಉದ್ಘಾಟನೆ ಮತ್ತು ಡಾ.ಕೆ.ಶಿವರಾಮ ಕಾರಂತ ಜನ್ಮದಿನಾಚರಣೆ ‘ಕಾರಂತರ ನೆನಪು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಭಾಗದ ಆರಂಭದಿಂದ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಪ್ರೊ.ವಿವೇಕ್ ರೈ ಹೆಸರು ಶಾಶ್ವತವಾಗಿರಬೇಕು ಎಂಬ ಈ ನಿಟ್ಟಿನಲ್ಲಿ ಈ ನೂತನ ಸಭಾಂಗಣಕ್ಕೆ ‘ವಿವೇಕ ರೈ ವಿಚಾರ ವೇದಿಕೆ’ ಎಂದು ಹೆಸರಿಡಲಾಗುವುದು ಎಂದು ಘೋಷಿಸಿದರು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ನಾಗಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವರಾಮ ಕಾರಂತರು ಬದುಕಿದ ರೀತಿ, ನಡೆದ ದಾರಿ ವಿಭಿನ್ನವಾದುದು ಮತ್ತು ಸಾಹಿತ್ಯಾಸಕ್ತರಿಗೆ ಪ್ರೇರಣದಾಯಕ ಎಂದರು.ಜಾನಪದ ವಿದ್ವಾಂಸ ಪ್ರೊ. ಕೆ.ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಹಿರಿಯರಾದ ಡಾ.ಭಾಸ್ಕರ ರೈ ಕುಕ್ಕುವಳ್ಳಿ, ರವೀಂದ್ರ ರೈ ಕಲ್ಲಿಮಾರ್, ವಾಸುದೇವ ಉಚ್ಷಿಲ, ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ, ಡಾ.ಪ್ರಕಾಶ್ಚಂದ್ರ ಶಿಶಿಲ, ಇಸ್ಮಾಯಿಲ್, ಮಂಗಳೂರು ವಿವಿ ಇಂಜಿನಿಯರ್ ಸಂತೋಷ್ ಮತ್ತಿತರರಿದ್ದರು.ಸಹಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶುಕುಮಾರ್ ನಿರೂಪಿಸಿದರು.