ಸಾರಾಂಶ
ಕುಮ್ಮಟದುರ್ಗದಲ್ಲಿರುವ ಜಟ್ಟಂಗಿ ರಾಮನ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ರುಂಡಗಳಿವೆ. ಇವು ಕುಮಾರರಾಮನ ಮತ್ತು ಇತರರ ಶಿರಗಳೆಂದು ಹೇಳಲಾಗುತ್ತದೆ. ಕುಮ್ಮಟದುರ್ಗಕ್ಕೆ ಹೊಂದಿಕೊಂಡಿರುವ ಜಬ್ಬಲಗುಡ್ಡದಲ್ಲಿ ನಾಲ್ಕು, ಇಂದರಗಿಯಲ್ಲಿ ಆರು ಹಾಗೂ ಮಲ್ಲಾಪುರದಲ್ಲಿ ಎರಡು, ಕುಮಾರರಾಮ ಮತ್ತು ಹೋಲ್ಕಿರಾಮನ ರುಂಡಗಳ ಮರದ ಪ್ರತಿಮೆಗಳಿವೆ.
ಕೊಪ್ಪಳ:
ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಕುಮ್ಮಟದುರ್ಗದ ಬೆಟ್ಟದಲ್ಲಿರುವ ಜಟ್ಟಂಗಿರಾಮನ ದೇವಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಾತ್ರೆ ಮಳೆಯ ನಡುವೆಯೂ ಸಡಗರ-ಸಂಭ್ರಮದಿಂದ ಜರುಗಿತು.ಕುಮ್ಮಟದುರ್ಗದಲ್ಲಿರುವ ಜಟ್ಟಂಗಿ ರಾಮನ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ರುಂಡಗಳಿವೆ. ಇವು ಕುಮಾರರಾಮನ ಮತ್ತು ಇತರರ ಶಿರಗಳೆಂದು ಹೇಳಲಾಗುತ್ತದೆ. ಕುಮ್ಮಟದುರ್ಗಕ್ಕೆ ಹೊಂದಿಕೊಂಡಿರುವ ಜಬ್ಬಲಗುಡ್ಡದಲ್ಲಿ ನಾಲ್ಕು, ಇಂದರಗಿಯಲ್ಲಿ ಆರು ಹಾಗೂ ಮಲ್ಲಾಪುರದಲ್ಲಿ ಎರಡು, ಕುಮಾರರಾಮ ಮತ್ತು ಹೋಲ್ಕಿರಾಮನ ರುಂಡಗಳ ಮರದ ಪ್ರತಿಮೆಗಳಿವೆ. ಇಂದರಗಿಯಲ್ಲಿರುವ ಆರು ರುಂಡ ಶಿಲ್ಪಗಳನ್ನು ಕುಮಾರರಾಮ, ಹೋಲ್ಕಿರಾಮ, ಬೈಚಪ್ಪ, ಕಾಟಣ್ಣ, ಕಂಪಿಲರಾಯ, ಭಾವಸಂಗಮನವು ಎಂದು ಹೇಳಲಾಗುತ್ತದೆ.
ಇಂದಿಗೂ ಪ್ರತಿವರ್ಷ ಹುಲಿಗೆಮ್ಮನ ಜಾತ್ರೆಗೆ ಒಂದು ದಿನ ಮುಂಚೆ ಮಲ್ಲಾಪುರ, ಇಂದರಗಿ, ಜಬ್ಬಲಗುಡ್ಡದಲ್ಲಿನ ಮರದ ರುಂಡ ಶಿಲ್ಪಗಳು ಕುಮ್ಮಟದುರ್ಗದಲ್ಲಿರುವ ಜಟ್ಟಂಗಿರಾಮನ ದೇವಾಲಯ ಪ್ರವೇಶಿಸುತ್ತವೆ. ಕುಮಾರರಾಮನ ಗೊಂದಲಿಗರ ಪದ, ಚೌಡ್ಕಿ ಪದ, ಜನಪದ ಹಾಡುತ್ತ ತಮ್ಮ ಆಚರಣೆ ಮಾಡುತ್ತಾರೆ. ಅಲ್ಲಿಂದ ಪೂಜೆ ಮಾಡಿದ ಅಕ್ಕಿಪಡಿ ಬಂದ ಮೇಲೆಯೇ ಹುಲಿಗೆಮ್ಮನ ಜಾತ್ರೆಯ ಕಾರ್ಯಗಳು ಪ್ರಾರಂಭವಾಗುತ್ತವೆ.ಕುಮ್ಮಟದುರ್ಗದ ಜಟ್ಟಂಗಿರಾಮನ ದೇವಾಲಯದದಲ್ಲಿ ಕುಮಾರರಾಮನ ಜಾತ್ರೆ ದಿನದಂದು ಮಕ್ಕಳ ಭಾಗ್ಯ ಕರುಣಿಸಲೆಂದು ಹರಕೆ ಕಟ್ಟುತ್ತಾರೆ. ಚಿಕ್ಕಮಕ್ಕಳ ಜವಳ ತೆಗೆಸುವುದು, ಬಾಸಿಂಗ ಬಿಡುವುದು, ದೀಡ್ ನಮಸ್ಕಾರ ಹಾಕುವ ಪದ್ಧತಿ ಅಂದಿನಿಂದ ಇಂದಿಗೂ ತಪ್ಪದೇ ನಡೆದುಕೊಂಡು ಬರುತ್ತಿದೆ. ಇಂದರಗಿ ಮಲ್ಲಾಪುರ, ಜಬ್ಬಲಗುಡ್ಡದ ಎಲ್ಲ ಮರದ ಮುಖಗಳು ಕುಮ್ಮಟದುರ್ಗದವನ್ನೇರಿ ಜಾತ್ರೆ ಮಾಡಿ ಅಲ್ಲಿಂದ ಅಕ್ಕಿಪಡಿ ಹುಲಗೆಮ್ಮನಿಗೆ ತಲುಪಿತು.
ಕುಮಾರರಾಮನ ಜಾತ್ರೆ ಆದ ಮರುದಿನವೇ ಹುಲಿಗೆಮ್ಮನ ಜಾತ್ರೆ ನಡೆಯುತ್ತದೆ ಎನ್ನುವಂತೆ ಬುಧವಾರ ಹುಲಿಗೆಮ್ಮ ದೇವಿ ಜಾತ್ರೆಯ ರಥೋತ್ಸವ ನಡೆಯಿತು.