ಗಣೇಶ, ಈದ್ ಮಿಲಾದ್: ಅಹಿತಕರ ಘಟನೇಲಿ ಭಾಗಿಯಾದರೆ ಕ್ರಮ

| Published : Aug 23 2025, 02:00 AM IST

ಗಣೇಶ, ಈದ್ ಮಿಲಾದ್: ಅಹಿತಕರ ಘಟನೇಲಿ ಭಾಗಿಯಾದರೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ವೇಳೆ ಯಾವುದೇ ಗಲಾಟೆ ಇಲ್ಲದೆ ಸೌಹಾರ್ದತೆಯಿಂದ ಆಚರಿಸಬೇಕು. ಒಂದು ವೇಳೆ ಯಾವುದೇ ಅಹಿತಕರ ಘಟನೆ ಉಂಟಾದರೆ ಸಂಬಂಧಿಸಿದವರ ವಿರುದ್ದ ಮುಲಾಜಿಲ್ಲದೆ ಕ್ರಮವಹಿಸಬೇಕಾಗುತ್ತದೆ ಎಂದು ಡಿವೈಎಸ್ಪಿ ಎಂ.ಧಮೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ವೇಳೆ ಯಾವುದೇ ಗಲಾಟೆ ಇಲ್ಲದೆ ಸೌಹಾರ್ದತೆಯಿಂದ ಆಚರಿಸಬೇಕು. ಒಂದು ವೇಳೆ ಯಾವುದೇ ಅಹಿತಕರ ಘಟನೆ ಉಂಟಾದರೆ ಸಂಬಂಧಿಸಿದವರ ವಿರುದ್ದ ಮುಲಾಜಿಲ್ಲದೆ ಕ್ರಮವಹಿಸಬೇಕಾಗುತ್ತದೆ ಎಂದು ಡಿವೈಎಸ್ಪಿ ಎಂ.ಧಮೇಂದ್ರ ಹೇಳಿದರು.

ಪಟ್ಟಣದ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಬುಧವಾರ ಗೌರಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳ ಆಚರಣೆ ವೇಳೆ ಯಾವುದೇ ಕೋಮಿನ ಭಾವನೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸುವ ಮೂಲಕ ಕಾನೂನು ಪಾಲಿಸಬೇಕು. ಇಲ್ಲಿಯ ತನಕವೂ ಕೊಳ್ಳೇಗಾಲ ಉಪವಿಭಾಗದಲ್ಲಿ ಎಲ್ಲ ಧರ್ಮದ ಮತ್ತು ಸಮುದಾಯಗಳ ಹಬ್ಬ-ಆಚರಣೆಗಳು ಶಾಂತಿ ಯುತವಾಗಿ , ಸೌಹಾರ್ದತೆಯಿಂದಲೇ ನಡೆದುಕೊಂಡು ಬಂದಿವೆ.

ವೈಯಕ್ತಿಕಯವಾಗಿ ಪ್ರತಿಯೊಬ್ಬರಲ್ಲೂ ಸೋದರತ್ವ ಮನೋಭಾವನೆ ಇಲ್ಲಿರುವುದು ವಿಶೇಷ. ಅಂತೆಯೇ, ಮುಂಬರುವ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ನಿಟ್ಟಿನಲ್ಲಿ ಎಲ್ಲಾ ಸಮಾಜಗಳ ಮುಖಂಡರು ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು ಉಪವಿಭಾಗ ವ್ಯಾಪ್ತಿಯಲ್ಲಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಇಲಾಖೆ ಕಟ್ಟೆಚ್ಚರವಹಿಸಲಾಗಿದೆ, ಹನೂರು, ಯಳಂದೂರು ಸೇರಿದಂತೆ ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯಲ್ಲಿ 457ಕಡೆಗಳಲ್ಲಿ ಗಣಪತಿ ಮೂರ್ತಿ ಸ್ಥಾಪನೆ ಮಾಡಲು ಸಂಬಂಧ ಅರ್ಜಿಗಳು ಬಂದಿವೆ, ಈ ಸಂಬಂಧ 337ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ

ನೂರಕ್ಕೂ ಅಧಿಕ ಮಂದಿ ಗೖಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು

ಈವೇಳೆ ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ಎ.ರಮೇಶ್, ಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಶಿವಮಾದಯ್ಯ, ಹನೂರು ಪಟ್ಟಣ ಪೊಲೀಸ್ ಠಾಣೆ ಸಿಪಿಐ ಆನಂದ ಮೂರ್ತಿ, ಆರಕ್ಷಕ ಉಪ ನಿರೀಕ್ಷಕರಾದ ಬಿ.ವಿ.ವರ್ಷಾ, ಸುಪ್ರೀತ್, ಚೆಲುವರಾಜ್, ಎ ಎಸೈ ತಖೀವುಲ್ಲಾ, ಮಹದೇವಸ್ವಾಮಿ, ನಗರಸಭೆ ಸದಸ್ಯ ಪ್ರಕಾಶ್, ಸ್ವಾಮಿ ನಂಜಪ್ಪ, ಮುಖಂಡರಾದ ಚಿಕ್ಕಮಾದನಾಯಕ, ಮುಳ್ಳೂರು ಮಂಜುನಾಥ್, ಸೋಮಶೇಖರ್, ಕರವೇ ಅಧ್ಯಕ್ಷ ಆಯಾಜ್, ಭೀಮನಗರದ ಮಹದೇವ ಸ್ವಾಮಿ, ಬೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ ಇನ್ನಿತರಿದ್ದರು.