ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾರತ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಚಟುವಟಿಕೆಗಳು. ಕೆಲವು ಕಡೆಗಳಲ್ಲಿ ವಿಶ್ವ ಸಂಗೀತ ದಿನದ ನಿನಾದವೂ ಜೋರಾಗಿಯೇ ಇತ್ತು. ಆದರೆ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಮಾತ್ರ ಭಿನ್ನ ವಾತಾವರಣ. ಬರ್ಲಿನ್ ನಗರದ ಶ್ರೀ ಗಣೇಶ ಹಿಂದೂ ದೇವಸ್ಥಾನ ಮತ್ತು ಹಸೆನ್ಹೈಡ್ ಪಾರ್ಕ್ನಲ್ಲಿ ಯೋಗ ಹಾಗೂ ಸಂಗೀತ ಸಮ್ಮಿಳನ. ಅದೂ ಮೈಸೂರಿನ ಪ್ರತಿಭೆಗಳ ಸಂಗಮ. ಯೋಗ ಹಾಗೂ ಸಂಗೀತದ ರಸದೌತಣವನ್ನು ವಿದೇಶಿ ನೆಲದಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿ ಭಾರತದ ಹಿರಿಮೆ ಎತ್ತಿ ಹಿಡಿದ ಹೆಮ್ಮೆಯ ಕ್ಷಣ. ಯೋಗ ಮಾಡುತ್ತಲೇ ಸಂಗೀತದ ಕ್ಷಣದಲ್ಲಿ ಮಿಂದೆದ್ದವರು ಬರ್ಲಿನ್ನ ಸಂಸ್ಕೃತಿ ಪ್ರಿಯರು.
ಮೂಲತಃ ಮೈಸೂರಿನವರಾದ ಸದ್ಯ ಬರ್ಲಿನ್ನಲ್ಲಿ ಉನ್ನತ ಶಿಕ್ಷಣದಲ್ಲಿ ನಿರತರಾಗಿರುವ, ಎಂಜಿನಿಯರಿಂಗ್ ಶಿಕ್ಷಣ ಪಡೆದು ನರರೋಗಗಳ ತಜ್ಞತೆ ಹಾಗೂ ಯೋಗದ ಕುರಿತು ಅಧ್ಯಯನ ನಡೆಸಿರುವ ಅಭಯ್ ಕೌಶಿಕ್ ಈ ಕಾರ್ಯಕ್ರಮದ ರೂವಾರಿ. ಬೆಂಗಳೂರಿನ ಬ್ರಿಟ್ಜ್ ಪಿಲಾನಿಯಲ್ಲಿ ಕಂಪ್ಯೂಟರ್ಸೈನ್ಸ್ನಲ್ಲಿ ಬಿಇ ಮುಗಿಸಿ ಲೈಜಿಕ್ ನಗರದಲ್ಲಿ ನ್ಯೂರೋ ಸೈನ್ಸ್ನಲ್ಲಿ ಪಿಎಚ್ಡಿ ಶಿಕ್ಷಣ ಪಡೆಯಲು ಜರ್ಮಿನಿಗೆ ತೆರಳಿದ್ದಾರೆ ಅಭಯ್. ಪ್ರಸ್ತುತ ಮ್ಯಾಕ್ಸ್ ಪ್ಲಾಂಕ್ ಸ್ಕೂಲ್ ಆಫ್ ಕಾಗ್ನಿಷನ್ನಲ್ಲಿ ಪಿಎಚ್ಡಿ ಅಭ್ಯರ್ಥಿ.ದಿ ಯೋಗಿಕ್ ಪರ್ಸ್ಪೆಕ್ಟಿವ್ ಎನ್ನುವ ಚಟುವಟಿಕೆಯನ್ನೂ ಆಗಾಗ ನಡೆಸುತ್ತಾರೆ. ಅವರಿಗೆ ಯೋಗದ ಕುರಿತು ಆಸಕ್ತಿ. ಖುದ್ದು ಯೋಗದ ಕುರಿತು ಆಸಕ್ತಿ ಬೆಳೆಸಿದವರು ಮೈಸೂರಿನಲ್ಲಿ ಪ್ರಖ್ಯಾತ ಯೋಗ ತಜ್ಞರೂ ಆಗಿರುವ ದೀಕ್ಷಿತ್ಆರೋಗ್ಯಧಾಮದ ಮುಖ್ಯಸ್ಥರು ಆಗಿರುವ ಆಯುರ್ವೇದ ವೈದ್ಯ ಡಾ.ಸಿ.ಎಸ್. ಅನಿಲ್ಕುಮಾರ್.ಮೈಸೂರು ಯೋಗಾಚಾರ್ಯ ಶ್ರೀನಾಥ ಅವರಿಂದ ಹಠ ಯೋಗ ಶಿಕ್ಷಕ ತರಬೇತಿ ಪಡೆದಿದ್ದಾರೆ ಅಭಯ್.ಈ ಬಾರಿ ವಿಭಿನ್ನವಾಗಿಯೇ ಯೋಗ ದಿನದ ಜತೆಗೆ ಸಂಗೀತ ದಿನ ಆಚರಿಸಲು ಅಭಯ್ಸಿದ್ದತೆ ಮಾಡಿಕೊಂಡಿದ್ದರು. ಇದಕ್ಕಾಗಿ ಅವರು ಬರ್ಲಿನ್ನಲ್ಲಿರುವ ಗಣೇಶ ಹಿಂದೂ ದೇವಸ್ಥಾನದ ಸಹಕಾರವನ್ನೂ ಪಡೆದಿದ್ದರು. ಅಲ್ಲಿಯೇ ಬೆಳಗಿನ ಯೋಗ ಚಟುವಟಿಕೆಗಳೂ ನಡೆದವು. ಯೋಗದ ಮಹತ್ವ ಕುರಿತು ಅಭಯ್ವಿವರಣೆ ನೀಡುತ್ತಲೇ ಉದ್ಯಾನವನದಲ್ಲಿ ಸೂರ್ಯ ನಮಸ್ಕಾರವನ್ನು ಪ್ರದರ್ಶಿಸಲು ಅಂತರರಾಷ್ಟ್ರೀಯ ಗುಂಪಿನ ನೇತೃತ್ವ ವಹಿಸಿದ್ದರು.ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ನಿಂದ ತರಬೇತಿ ಪಡೆದ ಇಬ್ಬರು ಯೋಗ ಶಿಕ್ಷಕರು ಕೂಡ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿತು. ಹಲವರು ಯೋಗ ಚಟುವಟಿಕೆಯಲ್ಲಿ ಭಾಗಿಯಾದರು.
ಇದರ ನಂತರ ಬರ್ಲಿನ್ ಹಸೆನ್ಹೈಡ್ ಪಾರ್ಕ್ನಲ್ಲಿ ನಾದ ಪ್ರಾಣಾಯಾಮ ಎಂಬ ಸೃಜನಶೀಲ ಕಾರ್ಯಕ್ರಮವನ್ನು ನಡೆಸಲಾಯಿತು. ಅಭಯ್ ಅವರ ಯೋಗ,ಪ್ರಾಣಾಯಾಮದ ಚಟುವಟಿಕೆಗೆ ಸಂಗೀತ ಸ್ಪರ್ಶ ನೀಡಿದವರು ಮೈಸೂರಿನವರೇ ಆದ ಯುವ ಪ್ರತಿಭೆ ಪಿಟೀಲು ವಾದಕ ಸುಮಂತ್ ಮಂಜುನಾಥ್. ಇಬ್ಬರೂ ಸೇರಿ ಕೆಲ ಹೊತ್ತು ನಡೆಸಿಕೊಟ್ಟ ಚಟುವಟಿಕೆಗಳು ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾದವು. ಯೋಗಾಸಕ್ತ ಅಂತರರಾಷ್ಟ್ರೀಯ ಗುಂಪಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಚಯವಾಗಿ ಮತ್ತು ನಾದ ಯೋಗವನ್ನು ಹಠ ಯೋಗಾಭ್ಯಾಸಗಳೊಂದಿಗೆ ಹೇಗೆ ಸಂಯೋಜಿಸಬಹುದು ಎಂಬುದನ್ನೂ ಮನವರಿಕೆ ಮಾಡಿಕೊಟ್ಟಿತು.ಇದಾದ ಬಳಿಕ ನಡೆದಿದ್ದು ಪಿಟೀಲು ವೈಭವ. ಈಗಾಗಲೇ ಕರ್ನಾಟಕ, ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳಲ್ಲಿ ತಮ್ಮ ಮಾಂತ್ರಿಕತೆಯಿಂದಲೇ ಹೆಸರು ಮಾಡಿರುವ, ಮೈಸೂರಿನ ವಿದ್ವಾನ್ಡಾ.ಎಂ.ಮಂಜುನಾಥ್ಅವರ ಕಾರ್ಯಕ್ರಮ. ಅವರಿಗೆ ಜತೆಯಾದವರು ಮಂಜುನಾಥ್ಅವರ ಹೆಮ್ಮೆಯ ಮಕ್ಕಳಾದ ಸುಮಂತ್ಮಂಜುನಾಥ್ಹಾಗೂ ಮಾಳವಿ ಮಂಜುನಾಥ್. ಸಂಗೀತ ಕ್ಷೇತ್ರದಲ್ಲಿ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಇಬ್ಬರು ಅಜ್ಜ ವಿದ್ವಾನ್ಮಹದೇವಪ್ಪ ಹಾಗೂ ತಂದೆ ಡಾ.ಮಂಜುನಾಥ್ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಈ ಮೂವರು ಸೇರಿ ಬರ್ಲಿನ್ನ ಗಣೇಶ ದೇವಸ್ಥಾನದಲ್ಲಿ ನೀಡಿದ ನೀಡಿದ ಕಾರ್ಯಕ್ರಮ ಕೂಡ ಅಲ್ಲಿನ ಸಂಗೀತಾಸಕ್ತರ ಹೃನ್ಮನ ತಣಿಸಿತು. ವಿದೇಶಿ ನೆಲದಲ್ಲಿ ಮೈಸೂರಿನ ಪ್ರತಿಭೆಗಳ ಅನುರಣನ ಮುದ ನೀಡಿತು.ಜಾನಪದ ತಜ್ಞ ಶ್ರೀ ಮತಿಘಟ್ಟ ಕೃಷ್ಣ ಮೂರ್ತಿ ಅವರ ಮೊಮ್ಮಗ ಶ್ರೀದತ್ತ ತಬಲಾ ವಾದನದಲ್ಲಿ ಮೂವರ ಪಿಟೀಲು ವಾದನಕ್ಕೆ ಜತೆಯಾದರು.
ಶ್ರೀ ಗಣೇಶ ಹಿಂದೂ ದೇವಸ್ಥಾನದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಹನುಮಯ್ಯ ವೈದ್ಯನಾಥನ್ , ದೇವಾಲಯ ಸಮಿತಿಯ ಸದಸ್ಯರಾದ ಆರ್. ಜಯರಾಮ ನಾಯ್ಡು, ವಿಲ್ವನಾಥನ್ ಕೃಷ್ಣಮೂರ್ತಿ ಅವರು ಇಡೀ ಕಾರ್ಯಕ್ರಮದ ವೇಳೆ ಅಭಯ್ಮತ್ತವರ ತಂಡವರಿಗೆ ಆಸರೆಯಾಗಿ ನಿಂತಿದ್ದರು.