ಕೈ ಹಿಡಿದ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ ಗಣೇಶ್‌

| Published : Jun 06 2024, 12:32 AM IST

ಸಾರಾಂಶ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ನೂತನ ಸಂಸದ ಸುನೀಲ್‌ ಬೋಸ್‌ಗೆ ೧೮ ಸಾವಿರಕ್ಕೂ ಹೆಚ್ಚು ಮತ ನೀಡಿದ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಧನ್ಯವಾದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ನೂತನ ಸಂಸದ ಸುನೀಲ್‌ ಬೋಸ್‌ಗೆ ೧೮ ಸಾವಿರಕ್ಕೂ ಹೆಚ್ಚು ಮತ ನೀಡಿದ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಧನ್ಯವಾದ ತಿಳಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ಶುರುವಾದ ನಂತರ ಕಾಂಗ್ರೆಸ್‌ ಪಕ್ಷದ ಎಲ್ಲಾ ವಿವಿಧ ಘಟಕಗಳ ಪದಾಧಿಕಾರಿಗಳು ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕಾರಣದಿಂದಲೇ ನಿರೀಕ್ಷೆಯಷ್ಟು ಲೀಡ್‌ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂದಿದೆ ಎಂದರು. ಚುನಾವಣೆಯಲ್ಲಿ ನಾನಾ ಚರ್ಚೆ ಬಂದರೂ ರಾಜ್ಯದಲ್ಲಿ ಸಂಸದರು ಗೆದ್ದಿದ್ದಾರೆ. ಜೊತೆಗೆ ಮತ ಗಳಿಕೆಯಲ್ಲೂ ಕಾಂಗ್ರೆಸ್‌ ಮುಂದಿದೆ. ಕ್ಷೇತ್ರದ ಜನರ ವಿಶ್ವಾಸ ಇದ್ದ ಕಾರಣದಿಂದಲೇ ೧೮ ಸಾವಿರಕ್ಕೂ ಹೆಚ್ಚು ಮತ ಲೀಡ್‌ ಬಂದಿದೆ. ಹೆಚ್ಚಿನ ಲೀಡ್‌ ಬರಲು ಕಾರಣರಾದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.

ಸಂಸದ ಸುನೀಲ್ ಬೋಸ್‌ ಗೆಲ್ಲುವ ವಿಶ್ವಾಸವಿತ್ತು. ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರೂ ೧.೮೮ ಲಕ್ಷ ಲೀಡ್‌ ಬಂದಿದೆ. ಸುನೀಲ್ ಬೋಸ್‌ ಕೂಡ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಮೇಲೆ ಮತದಾರರು ವಿಶ್ವಾಸ ಇಟ್ಟಿದ್ದಾರೆ. ನೂತನ ಸಂಸದರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತರುವ ಕೆಲಸ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ಎಂ.ಮುನಿರಾಜು,ಪಿ.ಬಿ. ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ, ಜಿಪಂ ಮಾಜಿ ಸದಸ್ಯರಾದ ಕೆರಹಳ್ಳಿ ನವೀನ್‌,ಪಿ.ಚನ್ನಪ್ಪ.ಬಿ.ಕೆ.ಬೊಮ್ಮಯ್ಯ,ಪಕ್ಷದ ಮುಖಂಡರಾದ ಬಿ.ಕುಮಾರಸ್ವಾಮಿ, ಎಚ್.ಎನ್.ಬಸವರಾಜು, ಜಿ.ಮಡಿವಾಳಪ್ಪ, ಎಸ್ಆರ್‌ಎಸ್‌ ರಾಜು, ರಾಘವಾಪುರ ಶ್ರೀನಿವಾಸಮೂರ್ತಿ, ಕಾರ್ಗಳ್ಳಿ ಸುರೇಶ್‌, ಪುಟ್ಟಸ್ವಾಮಿ ಆಚಾರ್‌, ಲಿಂಗರಾಜು, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್‌, ಗೌಡ್ರ ಮಧು ಇದ್ದರು.