ದಾಬಸ್‍ಪೇಟೆ: ಗ್ರಾಮೀಣ ಪ್ರದೇಶದ ರೈತರು ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿಗಳನ್ನು ಹಾಕಿಸಲು ಆರ್ಥಿಕವಾಗಿ ಸಬಲರಲ್ಲದ ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆ ವರದಾನವಾಗಿದೆ ಎಂದು ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಹನುಮಂತೇಗೌಡ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಬಿದಲೂರು ಗ್ರಾಮದ ಈರಪ್ಪನವರ ಜಮೀನಿನಲ್ಲಿ ರಾಜ್ಯ ಸರ್ಕಾರದ ಗಂಗಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದ ಅವರು, ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಯಿಂದ ಒಟ್ಟು 11 ಫಲಾನುಭವಿಗಳು ಆಯ್ಕೆಯಾಗಿದ್ದು, ಇಂದು ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡಿದ್ದೇವೆ. ಈ ಬಾರಿ ತಾಲೂಕಿನಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಶಾಸಕರು ಮತ್ತು ಸ್ಥಳೀಯ ಮುಖಂಡರು ಅಗತ್ಯವಿರುವ ರೈತರಿಗೆ ಯೋಜನೆಯ ಲಾಭವಾಗಬೇಕು ಎಂಬ ಆಶಯದಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಉಳಿದ ಸಮುದಾಯದ ನಿಗಮಗಳ ಮೂಲಕ ಆಯ್ಕೆಯಾದ ರೈತರಿಗೂ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿಯನ್ನು ಹಾಕಿಸಲಾಗುತ್ತದೆ, ಕ್ಷೇತ್ರದಲ್ಲಿ ಜನಪರವಾದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ರೈತರಿಗೆ ನೇರವಾಗಿ ಯೋಜನೆಗಳಿಂದ ಅನುಕೂಲವಾಗುವಂತೆ ಅಧಿಕಾರಿಗಳು ಹಾಗೂ ಶಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ಎನ್‍ಪಿಎ ಸದಸ್ಯ ಆಂಜನಮೂರ್ತಿ, ಕೆಪಿಸಿಸಿ ಸದಸ್ಯ ಪ್ರಕಾಶ್ ಬಾಬು, ಕಳಲುಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ರಬ್ ನವಾಜ್, ರುದ್ರೇಶ್, ಆಂಜನಮೂರ್ತಿ, ಧರಣೇಶ್, ಗಂಗಪ್ಪ, ಗಿರೀಶ್, ರಾಜಣ್ಣ, ಚಂದ್ರಣ್ಣ, ಪ್ರಕಾಶ್, ಭೂಮತ್ತು ಗಣಿ ಇಲಾಖೆಯ ಅಧಿಕಾರಿ ನೀಲಕಂಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.