ಸಾರಾಂಶ
ಉಡುಪಿ : ಉತ್ತರ ಭಾರತದಲ್ಲಿ ಕಂಡು ಕೇಳಿದ್ದ ಗ್ಯಾಂಗ್ ವಾರ್ ಇದೀಗ ದೇಗುಲಗಳ ನಗರಿ ಉಡುಪಿಗೂ ಕಾಲಿಟ್ಟಿದೆ. ಇಲ್ಲಿ ಕೆಲ ಸಮಯದಿಂದ ತಟಸ್ಥವಾಗಿದ್ದ ಕಾಪುವಿನ ಗರುಡ ಗ್ಯಾಂಗ್ ಉಡುಪಿ-ಮಣಿಪಾಲ ಮಾರ್ಗದಲ್ಲಿರುವ ಕುಂಜಿಬೆಟ್ಟುವಿನಲ್ಲಿ ನಡು ರಸ್ತೆಯಲ್ಲೇ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆಸಿದೆ.
ರಾಜ್ಯಾದ್ಯಂತ ಹತ್ತಾರು ದರೋಡೆ, ಹಲ್ಲೆ ಇತ್ಯಾದಿ ಅಪರಾಧ ಕೃತ್ಯಗಳನ್ನು ನಡೆಸಿರುವ ಈ ಗ್ಯಾಂಗ್ ಇದೀಗ ಇಬ್ಭಾಗವಾಗಿದ್ದು, ಪರಸ್ಪರ ರಸ್ತೆಯಲ್ಲಿ ತಲುವಾರು ಬೀಸಿ ಹೊಡೆದಾಡಿಕೊಂಡಿದೆ. ಮೇ 18ರಂದು ಈ ಘಟನೆ ನಡೆದಿದ್ದು, 20ರಂದು ಪ್ರಕರಣ ದಾಖಲಾಗಿತ್ತು. ಈ ಗ್ಯಾಂಗ್ ವಾರನ್ನು ಯಾರೋ ವಿಡಿಯೋ ಚಿತ್ರೀಕರಣ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಪೊಲೀಸರು ಆಶಿಕ್, ರಾಕೀಬ್ ಮತ್ತು ಸಕ್ಲೇನ್ ಎಂಬವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ.
ದರೋಡೆಗೆ ಯತ್ನ ದೂರು: ಮೇ 20ರಂದು ಯುವಕರ ತಂಡವೊಂದು ಟೆಸ್ಟ್ ಡ್ರೈವ್ ಕಾರಿನಲ್ಲಿ ಬಂದು ತಲವಾರು ತೋರಿಸಿ ದರೋಡೆಗೆ ಯತ್ನಿಸಿದರು ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಕಿಬ್ ಮತ್ತು ಆಶೀಕ್ ಎಂಬಾತನನ್ನು ಬಂಧಿಸಿದ್ದರು. ಇದೀಗ ವಿಡಿಯೋ ವೈರಲ್ ಆದ ಮೇಲೆ ಇದು ದರೋಡೆ ಅಲ್ಲ, ಗ್ಯಾಂಗ್ ವಾರ್ ಎಂಬುದು ಬಹಿರಂಗವಾಗಿದೆ. ಹಿಂದೆ ಒಂದಾಗಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಈ ತಂಡ, ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರದಲ್ಲಿ ಮಜೀದ್ ಮತ್ತು ಆಶೀಕ್ ನಡುವಿನ ವೈಮನಸ್ಸಿನಿಂದ ಇಬ್ಭಾಗವಾಗಿದೆ.
ಮೊನ್ನೆ ಎರಡೂ ತಂಡಗಳು ಸಂಧಾನಕ್ಕಾಗಿ ಕಾರಿನಲ್ಲಿ ಉಡುಪಿಗೆ ಬಂದಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪರಸ್ಪರ ಕಾರುಗಳನ್ನು ಡಿಕ್ಕಿ ಹೊಡೆಸಿ, ನಂತರ ಹೊಡೆದಾಡಿಕೊಂಡಿದ್ದಾರೆ. ಒಂದು ತಂಡದವರ ಕಾರನ್ನು ಇನ್ನೊಂದು ತಂಡದ ಸದಸ್ಯನಿಗೆ ಡಿಕ್ಕಿ ಹೊಡೆದು ಕೊಲೆಗೂ ಯತ್ನಿಸಿದ್ದಾರೆ. ನಂತರ ಮತ್ತೊಂದು ಸುತ್ತಿನ ತಲ್ವಾರ್ ದಾಳಿಗೆ ಮುಂದಾದಾಗ ಡಿಕ್ಕಿ ಹೊಡೆದ ಕಾರಿನ ತಂಡವರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳನ್ನೂ ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು, 2 ದ್ವಿಚಕ್ರ ವಾಹನ, ತಲ್ವಾರನ್ನು ವಶಕ್ಕೆ ಪಡೆದಿದ್ದೇವೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಆಧರಿಸಿ, ಹೆಚ್ಚುವರಿ ಸೆಕ್ಷನ್ಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಎಸ್ಪಿ ಡಾ.ಅರುಣ್ ಹೇಳಿದ್ದಾರೆ.
;Resize=(128,128))