ಸಾರಾಂಶ
ಬಳ್ಳಾರಿ ಮಹಾನಗರ ಪಾಲಿಕೆಯಿಂದ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವ 23 ನೂತನ ವಾಹನಗಳನ್ನು ಶಾಸಕ ನಾರಾ ಭರತ್ ರೆಡ್ಡಿ ನಲ್ಲಚೆರುವು ಪ್ರದೇಶದ ಕಸ ಸಂಗ್ರಹ ಘಟಕದ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿ ಮಹಾನಗರ ಪಾಲಿಕೆಯಿಂದ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವ 23 ನೂತನ ವಾಹನಗಳನ್ನು ಶಾಸಕ ನಾರಾ ಭರತ್ ರೆಡ್ಡಿ ನಲ್ಲಚೆರುವು ಪ್ರದೇಶದ ಕಸ ಸಂಗ್ರಹ ಘಟಕದ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಕುಸುಂ, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಪ್ರಭಂಜನಕುಮಾರ್, ಪಿ.ಗಾದೆಪ್ಪ, ಕುಬೇರಾ, ಮಿಂಚು ಸೀನಾ, ನೂರ್ ಮೊಹಮ್ಮದ್, ಪದ್ಮರೋಜ, ಟಿ.ನಾಜು, ಕಾಂಗ್ರೆಸ್ ಮುಖಂಡರಾದ ಅಯಾಜ್ ಅಹ್ಮದ್, ಸುಬ್ಬರಾಯುಡು, ಚಂಪಾ ಚವ್ಹಾಣ್ ಸೇರಿದಂತೆ ಹಲವರಿದ್ದರು.
ಬಳಿಕ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಏರ್ಪಡಿಸಿದ್ದ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಶಾಸಕ ಭರತ್ ರೆಡ್ಡಿ ಪಾಲ್ಗೊಂಡರು.ವಾರ್ಡ್ ಸಂಖ್ಯೆ 3ರ ವ್ಯಾಪ್ತಿಯ ಬಂಡಿಮೋಟ್ ಮಸೀದಿ ಹಿಂಭಾಗ ಅಂದಾಜು ವೆಚ್ಚ 63 ಲಕ್ಷ 50 ಸಾವಿರ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ತದನಂತರ ವಾರ್ಡ್ ಸಂಖ್ಯೆ 13ರ ಮಿಲ್ಲರ್ ಪೇಟೆಯಲ್ಲಿ ಅಂದಾಜು ವೆಚ್ಚ 50 ಲಕ್ಷ ರೂ.ಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ವಾರ್ಡ್ ಸಂಖ್ಯೆ 17ರ ವಿಶಾಲ ನಗರ-ಹನುಮಾನ ನಗರದಲ್ಲಿ ಅಂದಾಜು ವೆಚ್ಚ 31 ಲಕ್ಷ 83 ಸಾವಿರ ರೂ.ಗಳ ವೆಚ್ಚದಲ್ಲಿ ಕಾಮಗಾರಿಗೆ, ಅಂಜಿನಪ್ಪ ನಗರ ಹಾಗೂ ಬಿ.ಗೋನಾಳ್ ಗ್ರಾಮದ ಅಂಗನವಾಡಿ ನಿರ್ಮಾಣ ಕಾಮಗಾರಿಗಳಿಗೆ (ಅನುಕ್ರಮವಾಗಿ ಅಂದಾಜು 40 ಲಕ್ಷ ರೂ.ಗಳು, 20 ಲಕ್ಷ ರೂ.ಗಳ ವೆಚ್ಚ) ಚಾಲನೆ ನೀಡಿ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ ಸೇರಿದಂತೆ ಹಲವರು ಹಾಜರಿದ್ದರು.