ಹೆದ್ದಾರಿಯಲ್ಲಿ ಅನಿಲ ಸೋರಿಕೆ: 10 ಗಂಟೆ ತೆರವು ಕಾರ್ಯಾಚರಣೆ

| Published : Dec 10 2024, 12:30 AM IST

ಹೆದ್ದಾರಿಯಲ್ಲಿ ಅನಿಲ ಸೋರಿಕೆ: 10 ಗಂಟೆ ತೆರವು ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹೈಡ್ರೋಕ್ಲೋರಿಕ್ ಅನಿಲ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ಸೋಮವಾರ ಸೋರಿಕೆ ಉಂಟಾಯಿತು. ಅಗ್ನಿಶಾಮಕ ದಳ, ರಾಜ್ಯ ವಿಪತ್ತು ಪಡೆ (ಎಸ್‌ಡಿಆರ್‌ಎಫ್) ಹಾಗೂ ಬಿಎಎಸ್ ಎಫ್ ತಂಡ ನಿರಂತರ 10 ಗಂಟೆಗಳ ಕಾರ್ಯಾಚರಣೆ ನಡೆಸುವ ಮೂಲಕ ಟ್ಯಾಂಕರಿನಲ್ಲಿದ್ದ 33,000 ಲೀ. (ಐಬಿಸಿ) ಅನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕಾರವಾರದಿಂದ ಕೊಚ್ಚಿಯತ್ತ ಹೈಡ್ರೋಕ್ಲೋರಿಕ್ ಅನಿಲ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ವಾಹನದಲ್ಲಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ಸೋಮವಾರ ಸೋರಿಕೆ ಉಂಟಾಯಿತು. ಅಗ್ನಿಶಾಮಕ ದಳ, ರಾಜ್ಯ ವಿಪತ್ತು ಪಡೆ (ಎಸ್‌ಡಿಆರ್‌ಎಫ್) ಹಾಗೂ ಬಿಎಎಸ್ ಎಫ್ ತಂಡ ನಿರಂತರ 10 ಗಂಟೆಗಳ ಕಾರ್ಯಾಚರಣೆ ನಡೆಸುವ ಮೂಲಕ ಟ್ಯಾಂಕರಿನಲ್ಲಿದ್ದ 33,000 ಲೀ. (ಐಬಿಸಿ) ಅನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಿದೆ.

ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66 ಆಗಿ ಕೊಚ್ಚಿಯತ್ತ ತೆರಳುತ್ತಿದ್ದ ಟ್ಯಾಂಕರಿನಲ್ಲಿ ಸೋರಿಕೆ ಆರಂಭವಾಗಿದೆ. ಕೋಟೆಕಾರು ಉಚ್ಚಿಲ ಸಮೀಪ ಟ್ಯಾಂಕರ್ ಚಾಲಕ ಬೇರೆ ವಾಹನದ ಚಾಲಕರ ಸೂಚನೆ ಮೇರೆಗೆ ಟ್ಯಾಂಕರ್ ರಸ್ತೆಬದಿಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಟ್ಯಾಂಕರಿನೊಳಕ್ಕಿದ್ದ ಹೈಡ್ರೋಕ್ಲೋರಿಕ್ ಅನಿಲ ಸೋರಿಕೆಯಾಗುವುದನ್ನು ಗಮನಿಸಿ, ಸ್ಥಳೀಯ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಮತ್ತು ಉಳ್ಳಾಲ ಠಾಣೆಯ ಪೊಲೀಸರು ಆಗಮಿಸಿ ಅಗ್ನಿ ಶಾಮಕ ದಳ ಠಾಣೆಗೆ ಮಾಹಿತಿ ನೀಡಿದ್ದಾರೆ. ಸೋರಿಕೆ ನಿರಂತರವಾಗುತ್ತಿದ್ದ ನಡುವೆ ಎಂಸೀಲ್ ಹಾಕಿ ಅನಿಲವನ್ನು ತಡೆಯುವ ಪ್ರಯತ್ನ ನಡೆಯಿತಾದರೂ, ಅದು ಸಾಧ್ಯವಾಗಲಿಲ್ಲ.

ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು, ಕೋಟೆಕಾರು ಗ್ರಾಮಕರಣಿಕೆ ನಯನಾ ಸೇರಿದಂತೆ ಕಂದಾಯ ಇಲಾಖೆ ಭೇಟಿ ಕೊಟ್ಟು, ಅಪಾಯದ ಮುನ್ಸೂಚನೆ ಅರಿತು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದೆ. ಜಿಲ್ಲಾಡಳಿತದಿಂದ ರಾಸಾಯನಿಕ ಅವಘಢಗಳಿಗೆ ಸಂಬಂಧಿಸಿದ ತುರ್ತು ಕಾರ್ಯಾಚರಣೆ ಕೈಗೊಳ್ಳುವ ಎಂಸಿಎಫ್, ಬಿಎಎಸ್ ಎಫ್ ಹಾಗೂ ಎಸ್ ಡಿಆರ್‌ಎಫ್‌ಗೆ ಸೂಚನೆ ನೀಡಲಾಯಿತು.

ಟ್ಯಾಂಕರಿನೊಳಕ್ಕೆ ಒಟ್ಟು 33,000 ಲೀ. ಅನಿಲವಿದ್ದು, ಸಂಜೆ 7 ಗಂಟೆಯವರೆಗೆ ಅಂದಾಜು 15,000 ಲೀ.ನಷ್ಟು ಅನಿಲವನ್ನು ಬೇರೆ ಟ್ಯಾಂಕರಿಗೆ ಸ್ಥಳಾಂತರಿಸಲಾಯಿತು.

ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಪ್ರದೇಶದಲ್ಲಿ ಮಧ್ಯಾಹ್ನ ನಂತರ ಕಾರ್ಯಾಚರಣೆ ಆರಂಭಿಸಲಾಗಿದೆ. ಕೆಲ ಮೀ. ಹಂತದಲ್ಲಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ವಾಹನಗಳಾಗಲಿ, ಜನಸಂಚಾರವಾಗಲಿ ರಾತ್ರಿಯವರೆಗೂ ನಿರ್ಬಂಧಿಸಲಿಲ್ಲ.