ಸಾರಾಂಶ
ಪಟ್ಟಣದಲ್ಲಿ ಇಕ್ಕಟ್ಟಾದ ರಸ್ತೆಯ ಪರಿಣಾಮ ಇಂತಹ ಘಟನೆ ನಡೆದಿದೆ. ಐಆರ್ಬಿ ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಹೊನ್ನಾವರ: ಪಟ್ಟಣದ ಕರ್ನಲ್ ಹಿಲ್ ಸಮೀಪ ಶನಿವಾರ ರಾತ್ರಿ ಗ್ಯಾಸ್ ಟ್ಯಾಂಕರ್ ಮನೆಯ ಸಮೀಪ ಹೋಗಿ ಬಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಿ ಮನೆಯವರ ಸಮಸ್ಯೆ ಆಲಿಸುವ ಕಾರ್ಯ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಇಕ್ಕಟ್ಟಾದ ರಸ್ತೆಯ ಪರಿಣಾಮ ಇಂತಹ ಘಟನೆ ನಡೆದಿದೆ. ಐಆರ್ಬಿ ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣ. ರಸ್ತೆಯ ಬಲಬದಿಯಲ್ಲಿ ಟ್ಯಾಂಕರ್ ನಿಲ್ಲಿಸಿ ತೆರಳಿದ್ದಾಗ ರಸ್ತೆ ಪಕ್ಕದ ತಗ್ಗು ಪ್ರದೇಶದ ಮನೆಯ ಮುಂದೆ ಹೋಗಿ ಬಿದ್ದಿದೆ. ರಸ್ತೆ ಅಂಚಿನ ಮೂರು ವಿದ್ಯುತ್ ಕಂಬಕ್ಕೆ ಹಾನಿಯಾಗುವುಲ್ಲದೇ ಒಂದು ಮನೆಯ ಮುಂಭಾಗಕ್ಕೆ ಭಾಗಶಃ ಹಾನಿಯಾಗಿದೆ. ಪಕ್ಕದ ಮನೆಯ ಕೆಲವು ಭಾಗಕ್ಕೆ ಹಾನಿ ಸಂಭವಿಸಿದೆ. ಗ್ಯಾಸ್ ತುಂಬಿದ ಟ್ಯಾಂಕರ್ ಆಗಿರುವುದರಿಂದ ಮನೆಯ ಮಂದಿಯೆಲ್ಲ ಗಾಬರಿಯಾಗಿ ಮನೆ ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದರು. ಸೋರಿಕೆ ಆಗಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮನೆಯ ಸಮೀಪದಲ್ಲೆ ಕುಳಿತು ರಾತ್ರಿ ಕಳೆದಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೊರತಾಗಿ ಮನೆಯ ಸಮೀಪ ಯಾರೂ ಬಂದಿಲ್ಲ . ರಾತ್ರಿ ಊಟ, ಮುಂಜಾನೆ ಉಪಾಹಾರ, ವಾಸ ಮಾಡಲು ಬದಲಿ ವ್ಯವಸ್ಥೆ ಕಲ್ಪಿಸಬೇಕಿದ್ದ ತಾಲೂಕು ಆಡಳಿತ ಇತ್ತ ಸುಳಿದಿಲ್ಲ. ಯಾರೊಬ್ಬರೂ ನಮ್ಮ ಕಷ್ಟಕ್ಕೆ ಧಾವಿಸಿಲ್ಲ. ನೆರೆಯ ತಾಲೂಕಿನ ಬರ್ಗಿಯಲ್ಲಿ ಕೆಲವು ವರ್ಷದ ಹಿಂದೆ ನಡೆದ ದುರಂತ ಕಣ್ಣಮುಂದೆ ಬಂದಂತಾಗಿದೆ. ಆಮೇಲೆ ಪರಿಹಾರ ಕೊಡುವುದಕ್ಕಿಂತ ತೊಂದರೆಯಲ್ಲಿದ್ದಾಗ ಸಹಾಯ ಮಾಡಬೇಕು ಎಂದು ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಮನೆ ಮಾಲೀಕ ಪ್ರಭಾಕರ ಆಚಾರಿ ಮಾತನಾಡಿ, ಇಬ್ಬರೂ ಹೃದಯ ರೋಗದಿಂದ ಬಳಲುತ್ತಿದ್ದು, ಊಟ, ವಸತಿ ಔಷಧಿ ಬಗ್ಗೆ ಯಾರೂ ಸ್ಪಂದಿಸಿಲ್ಲ. ಮನೆಗೆ ಹಾನಿ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಎಲ್ಲವನ್ನೂ ಸರಿಪಡಿಸುವತ್ತ ಅಧಿಕಾರಿಗಳು ಜವಾಬ್ದಾರಿ ವಹಿಸಲಿ ಎಂದು ಹೇಳಿದರು.
ಸ್ಥಳೀಯರಾದ ನಿತಿನ್ ಆಚಾರಿ ಮಾತನಾಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಇಂತಹ ದುರಂತ ಸಂಭವಿಸುತ್ತಿದೆ. ತಗ್ಗು ಪ್ರದೇಶದಲ್ಲಿ ಮನೆ ಇದ್ದರೂ ಹೆದ್ದಾರಿ ತಡೆಗೋಡೆ ನಿರ್ಮಿಸಿಲ್ಲ. ರಸ್ತೆ ಪಕ್ಕ ಗೂಡಂಗಡಿಗಳು ಅನಧಿಕೃತವಾಗಿದ್ದರೂ, ಪಪಂ. ಕರ ವಸೂಲಿ ಮಾಡುತ್ತಿದೆ. ಇದರಿಂದ ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಹೋಗಿ ಇಂತಹ ದುರಂತ ಸಂಭವಿಸುತ್ತಿದೆ. ಇದರ ನೇರ ಹೊಣೆಗಾರರು ಅಧಿಕಾರಿಗಳೆ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.