Gauri and Ganesh festivals celebrated with devotion in Tarikere.

ತರೀಕೆರೆ: ಸೋಮವಾರ ಪಟ್ಟಣದ ವಿವಿಧ ಮನೆಗಳಲ್ಲಿ ಭಕ್ತರು ಗೌರಿ-ಗಣೇಶ ಹಬ್ಬವನ್ನು ಶ್ರದ್ಧಾಭಕ್ತಿಯಿಂದ

ಆಚರಿಸಿದರು. ಗೌರಿ ಹಬ್ಬದ ಸಲುವಾಗಿ ಮನೆಗಳನ್ನು ತಳಿರು ತೋರಣಗಳಿಂದ, ಬಣ್ಣದ ರಂಗೋಲಿಗಳಿಂದ, ಮಿನಿ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಮಹಿಳೆಯರು ಸಮಯಕ್ಕೆ ಸರಿಯಾಗಿ ಗಂಗೆಯನ್ನು ತಂದು, ಅಲಂಕೃತ ಮಂಟಪದಲ್ಲಿಟ್ಟು, ಮೊದಲು ಗಣಪತಿ ಪೂಜೆ ಮಾಡಿ ನಂತರ ಗಂಗೆಯನ್ನು ಪೂಜಿಸಿ, ನಂತರ ಸ್ವರ್ಣಗೌರಿಯನ್ನು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಅರಿಶಿನ ಕುಂಕಮ, ಮಂಗಳ ದ್ರವ್ಯಗಳೊಂದಿಗೆ, ಹೂವು, ಪತ್ರೆಗಳಿಂದ ಪೂಜಿಸಿ, ಬಳೆ ಬಿಚ್ಚೋಲೆ, ಗೆಜ್ಜೆ ವಸ್ತ್ರ, ಸ್ವರ್ಣಗೌರಿಗೆ 16 ಎಳೆಯನ್ನು ಹಾಕಿ, ಅಷ್ಟೋತ್ತರ ಕುಂಕುಮಾರ್ಚನೆ, ಗೌರಿದಾರದೊಂದಿಗೆ ಪೂಜಿಸಲಾಯಿತು.

ವಿವಿಧ ಬಗೆಯ ಹಣ್ಣು ಕಾಯಿ, ಪಾಯಸ, ಹೋಳಿಗೆ, ಕೋಸುಂಬರಿ ನೇವೇದ್ಯ ಅರ್ಪಿಸಿ ಮಹಾ ಮಂಗಳಾರತಿ

ನೆರವೇರಿಸಲಾಯಿತು. ನಂತರ ಗೌರಿ ದಾರ ಧರಿಸಿ ಉಪಾಯನದಾನ ಸಲ್ಲಿಸಿ, ಮಹಿಳೆಯರು ಬಾಗಿನ ಅರ್ಪಿಸಿ ಪರಸ್ಪರ ಶುಭಾಷಯ ಕೋರಿದರು. ಸ್ವರ್ಣಗೌರಿಗೆ ಆರತಿ ನಂತರ ವ್ರತಕಥೆ ವಾಚಿಸಲಾಯಿತು.

ನಂತರ ಅಲಂಕೃತ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಹೂವು ಹಣ್ಣು ವಿವಿಧ ಪತ್ರೆ, ಗರಿಕೆಗಳಿಂದ ಪೂಜಿಸಿ ಗಣಪತಿಯನ್ನು ಎಳೆಗಳಿಂದ ಅಲಂಕರಿಸಿ ಅಷ್ಟೋತ್ತರಗಳಿಂದ ಪೂಜಿಸಿ, ನೇವೇದ್ಯ ಅರ್ಪಿಸಿ ಮಹಾ ಮಂಗಳಾರತಿ ನೆರವೇರಿಸಿ, ಉಪಾಯನದಾನ ಸಲ್ಲಿಸಿ

ಗಣಪತಿಗೆ 21 ನಮಸ್ಕಾರಗಳನ್ನು ಹಾಕಿ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

------------

ಫೋಟೋ ಇದೆಃ

15ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಯಿತು.