ಸಾರಾಂಶ
ಕೊಪ್ಪಳ:
ತಾಲೂಕಿನ ಕೋಳೂರು ಗ್ರಾಮದ ಬಳಿ ತಲೆ ಎತ್ತಲಿರುವ ಗವಿಮಠ ಗುರುಕುಲ ಶಿಕ್ಷಣ ಸಂಸ್ಥೆಯ 45 ಎಕರೆ ವ್ಯಾಪ್ತಿಯಲ್ಲಿ ಬರೋಬ್ಬರಿ 25000 ಸಸಿ ನೆಟ್ಟು ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಅಭಿವೃದ್ಧಿಪಡಿಸಲು ಗವಿಸಿದ್ಧೇಶ್ವರ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.ಶ್ರೀಗಳು ಸೇರಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರ ಮಹಾಂತೇಶ ದರಗದ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರಂತೆ ಪ್ರತಿ ಚದರ್ ಮೀಟರ್ಗೆ ಸಸಿ ನೆಟ್ಟು, ದಟ್ಟವಾಗಿ ಅರಣ್ಯ ಬೆಳೆಸಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಗವಿಮಠ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಇದರಿಂದ ಸಂಪ್ರದಾಯಿಕ ಕಾಡುಗಳಿಂದ ಹತ್ತು ಪಟ್ಟು ವೇಗವಾಗಿ ಗಿಡಗಳು ಬೆಳೆಯುತ್ತವೆ ಎನ್ನುವುದು ಇದರ ವಿಶೇಷತೆಯಾಗಿದೆ
ಏಪ್ರಿಲ್ ಕೂಲ್:ಏಪ್ರಿಲ್ 1 ಮೂರ್ಖರ ದಿನವನ್ನಾಗಿ ಆಚರಿಸುವುದಕ್ಕಿಂತ ಜೂನ್ ತಿಂಗಳಲ್ಲಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟರೇ ಏಪ್ರಿಲ್ ಕೂಲ್ ದಿನವಾಗಿ ಆಚರಿಸಬಹುದು ಎನ್ನುವ ಕಲ್ಪನೆಯೊಂದಿಗೆ 45 ಎಕರೆ ವಿಸ್ತಾರದಲ್ಲಿ 2 ಕಿಲೋ ಮೀಟರ್ ಉದ್ದ ಹಾಗೂ 12 ಅಡಿ ಅಗಲದಲ್ಲಿ ವಿಯಾವಾಕಿ ಮಾದರಿ ಅನುಸರಿಸಿ ಕಾಯಾ, ಬೇವು, ಬನ್ನಿ, ಹಲಸು, ಆಲ, ಅರಳಿ, ಬಿದಿರು, ತೆಂಗು, ಹೊಂಗೆ, ನೆರಳೆ, ಪಾರಿಜಾತ, ತೇಗ, ಹೂಳೆಮತ್ತಿ, ಗುಲಮೋಹರ, ಕದಂಬ, ಮಾವು ಸೇರಿದಂತೆ 60 ಬಗೆಯ 25 ಸಾವಿರ ಸಸಿ ನೆಡಲಾಗುತ್ತದೆ.
ಡಿಎಫ್ಒ ಸಾಮಾಜಿಕ ಅರಣ್ಯ ಹುಸೇನ ಬಸೀಯಾ ಫೆಂಡಾರಿ, ಮುಖಂಡರಾದ ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಗಾಳೆಪ್ಪ ದದೆಗಲ್, ಗುರುರಾಜ ಹಲಿಗೇರಿ, ಎಸಿಎಫ್ ಗಾಯತ್ರಿ ಲೋಕಣ್ಣವರ, ಆರ್ಎಫ್ಒ ಗುರುನಗೌಡ ಪಾಟೀಲ್, ಎಸಿಎಫ್ ಎ.ಎಚ್. ಮುಲ್ಲಾ, ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಸೇರಿದಂತೆ ಅನೇಕರು ಇದ್ದರು.