ಲಿಂಗ ಸೂಕ್ಷ್ಮತೆ ಜ್ಞಾನ ಅಗತ್ಯ

| Published : Nov 10 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯದ ಮೂಲವನ್ನು ಅರಿಯಲು ಲಿಂಗ ಸೂಕ್ಷ್ಮತೆ ಜ್ಞಾನ ಅತ್ಯಂತ ಅಗತ್ಯ ಎಂದು ಸ್ಪಂದನಾ ಸಂಸ್ಥೆಯ ನಿರ್ದೇಶಕಿ ವಿ.ಸುಶೀಲಾ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯದ ಮೂಲವನ್ನು ಅರಿಯಲು ಲಿಂಗ ಸೂಕ್ಷ್ಮತೆ ಜ್ಞಾನ ಅತ್ಯಂತ ಅಗತ್ಯ ಎಂದು ಸ್ಪಂದನಾ ಸಂಸ್ಥೆಯ ನಿರ್ದೇಶಕಿ ವಿ.ಸುಶೀಲಾ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಉನ್ನತ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಲಿಂಗತ್ವ ಸೂಕ್ಷ್ಮತೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗ ಮತ್ತು ಲಿಂಗತ್ವದ ವಿಭಿನ್ನ ಆಯಾಮಗಳ ಬಗ್ಗೆ ವಿಶ್ಲೇಷಣೆ ನಡೆಸಿ, ಕುಟುಂಬ, ಶಿಕ್ಷಣ, ಉದ್ಯೋಗ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವ ಅಸಮಾನತೆಗಳು ಹೇಗೆ ರೂಪಗೊಳ್ಳುತ್ತವೆ. ಮತ್ತು ಅವು ಮಹಿಳೆಯರ ಹಾಗೂ ಇತರ ಲಿಂಗ ಗುಂಪಿನ ಅವಕಾಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿವರಿಸಿದರು.

ಜನಶಕ್ತಿ ಸಂಸ್ಥೆಯ ಉಪಾಧ್ಯಕ್ಷೆ ಗೌರಿ ಮಾತನಾಡಿ, ದುರ್ಗಾ ನಾಟಕವನ್ನು ಪ್ರಸ್ತುತಪಡಿಸುವ ಮೂಲಕ, ಹೆಣ್ಣು,ಹೊನ್ನು,ಮಣ್ಣು ಎನ್ನುವ ಸ್ತ್ರೀನಿಷ್ಠೆ ಮಾಯೆಯ ಕಲ್ಪನೆಯನ್ನು ಪ್ರಶ್ನಿಸಿ, ಅದನ್ನು ನಿರಾಕರಿಸುವ ಹಾಗೂ ಪ್ರತಿರೋಧಿಸುವ ಹೆಣ್ಣಿನ ಅಸ್ತಿತ್ವವನ್ನು ಪರಾಮರ್ಶಿಸುವ ಆಶಯ ವ್ಯಕ್ತಪಡಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ,ಬಿ.ಎಲ್.ಲಕ್ಕಣವರ ಮಾತನಾಡಿ, ಸಮಾಜದ ವಿವಿಧ ವಲಯಗಳಲ್ಲಿ ಲಿಂಗ ಸಮಾನತೆ ಸಾಧಿಸಬೇಕಾದರೆ ಲಿಂಗತ್ವ ಸೂಕ್ಷ್ಮತಾ ಅರಿವು ಅತ್ಯಂತ ಮುಖ್ಯ. ಅಷ್ಟೇ ಅಲ್ಲದೇ ಮಹಿಳಾ ವಿಶ್ವವಿದ್ಯಾಲಯದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎ.ಕಟಗೂರ ಮಾತನಾಡಿ, ಲಿಂಗತ್ವ ಸೂಕ್ಷ್ಮತಾ ಅರಿವಿನಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಇನ್ನೂ ಮುಂದುವರಿಯುತ್ತಿರುವ ಲಿಂಗ ಅಸಮಾನತೆ ಮತ್ತು ತಾರತಮ್ಯ ನೀತಿಯನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾಗಿವೆ. ಲಿಂಗ ಸಮಾನತೆ ಇಂದು ಸಮಾಜದ ತುರ್ತು ಅಗತ್ಯವಾಗಿದ್ದು, ಯುವ ಪೀಳಿಗೆಯಲ್ಲಿ ಈ ಅರಿವು ಮೂಡಿಸುವುದು ಕಾಲದ ಬೇಡಿಕೆಯಾಗಿದೆ ಎಂದರು.

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಲಕ್ಷಿದೇವಿ.ವೈ ಮಾತನಾಡಿದರು. ಸಿಬ್ಬಂದಿ ಡಾ.ಶಶಿಕಲಾ ರಾಠೋಡ ನಿರೂಪಿಸಿದರು, ಡಾ.ಭಾಗ್ಯಶ್ರೀ ದೊಡಮನಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎಲ್.ಹೆಚ್.ಮಮದಾಪೂರ ವಂದಿಸಿದರು. ಕಾರ್ಯಾಗಾರದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಹಂಪನಾ, ಮತ್ತು ಐಕ್ಯೂಎಸಿ ಸಂಯೋಜಕ ಡಾ.ಪ್ರದೀಪ, ಅತಿಥಿ ಉಪನ್ಯಾಸಕರು, ವಿವಿಧ ವಿಭಾಗದ ವಿದ್ಯಾರ್ಥಿಗಳು, ಮತ್ತಿತರಿದ್ದರು.

ಪೋಟೋ: ೧. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಉನ್ನತ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇವರ ಸಹಯೋಗದಲ್ಲಿ, ಇತ್ತೀಚಿಗೆ ಹಮ್ಮಿಕೊಂಡಿದ್ದ ಲಿಂಗತ್ವ ಸೂಕ್ಷö್ಮತಾ ಕುರಿತ ಕಾರ್ಯಾಗಾರವನ್ನು ಸ್ಪಂದನಾ ಸಂಸ್ಥೆಯ ನಿರ್ದೇಶಕಿ ವ್ಹಿ. ಸುಶೀಲಾ ಹಾಗೂ ಮತ್ತಿತರು ಉದ್ಘಾಟಿಸಿದರು.