ಕನ್ನಡಪ್ರಭವಾರ್ತೆ ತಿಪಟೂರು
ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ಹಾಗೂ ಸಾರ್ವಜನಿಕ ವಲಯದ ಖಾಸಗೀಕರಣ ನೀತಿ ವಿರುದ್ಧ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ತಿಪಟೂರಿನಲ್ಲಿ ಯಶಸ್ವಿಯಾಗಿದೆ. ಜನರು ಅಂಗಡಿ-ಮುಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ.ಗುರುವಾರ ನಗರದ ಬಹುತೇಕ ಅಂಗಡಿ, ಹೋಟೆಲ್, ಮಾಲ್ಗಳು ಮಧ್ಯಾಹ್ನದವರೆಗೂ ಬಂದ್ ಆಗಿದ್ದವು. ಆಟೋ ಬಸ್ಗಳ ಸಂಚಾರ ಎಂದಿನಂತಿತ್ತು. ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು. ಗ್ರಾಮದೇವತೆ ಕೆಂಪಮ್ಮ ದೇವಸ್ಥಾನದಿಂದ ನಗರಸಭೆ ವೃತ್ತದವರೆಗೆ ನೂರಾರು ರೈತರು ಮತ್ತು ಕಾರ್ಮಿಕರು ಬಾವುಟಗಳನ್ನು ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರಸಭಾ ವೃತ್ತದಲ್ಲಿ ಕುಳಿತು ಪ್ರತಿಭಟನೆ ಹಾಗೂ ಕೆಲಕಾಲ ರಸ್ತೆತಡೆ ಆಚರಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಟೂಡಾ ಮಾತನಾಡಿ, ಕೇಂದ್ರ ಸರ್ಕಾರದ ವಿಬಿ ರಾಮ್ ಜಿ ಕಾನೂನು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಅಮೆರಿಕದೊಂದಿಗೆ ಮಾಡಿಕೊಳ್ಳಲು ಹೊರಟಿರುವ ಎಫ್ಟಿಎ ದೇಶದ ರೈತರಿಗೆ ಮಾರಕವಾಗಲಿದೆ ಎಂದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ, ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಅನುಸೂಯ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ತಿಮ್ಲಾಪುರ ದೇವರಾಜು, ಸೌಹಾರ್ದ ತಿಪಟೂರಿನ ಕಾರ್ಯದರ್ಶಿ ಅಲ್ಲಾಬಕ್ಷ, ತಾಲೂಕು ಕಾರ್ಯದರ್ಶಿ ಶೈಲಾ, ಹಮಾಲಿ ಕಾರ್ಮಿಕರ ಸಂಘದ ಮುಖಂಡ ಲಕ್ಷ್ಮಿಕಾಂತ್, ರಾಜ್ಯ ರೈತ ಸಂಘದ ಅಧ್ಯಕ್ಷ ಜಯಾನಂದಯ್ಯ ಮಾತನಾಡಿದರು. ಬೆಲೆ ಕಾವಲು ಸಮಿತಿ ಶ್ರೀಕಾಂತ್ ಕೆಳಹಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಭೈರಪ್ಪ, ಕುಮಾರಯ್ಯ, ಅಂಗನವಾಡಿ ನೌಕರರ ಸಂಘದ ಶಿವಮ್ಮ ಮತ್ತು ಮಮತಾ, ಸೌಹಾರ್ದ ತಿಪಟೂರು ಸಂಘಟನೆಯ ತಾಸಿನ್, ನದೀಮ್ ಟೈಯರ್, ಶಫಿವುಲ್ಲಾ ಶರೀಫ್, ಸಮಿವುಲ್ಲಾ, ಲೋಕೇಶ್, ಶಾರುಕ್, ರಫಿ, ಸೈಯದ್ ಸಫಿ, ಸಾಬಿರ್, ಹಮಾಲಿ ಕಾರ್ಮಿಕರ ಸಂಘಟನೆಯ ಜಯರಾಮ್ ಮತ್ತು ಪ್ರಕಾಶ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು. ಗ್ರೇಡ್೨ ತಹಸೀಲ್ದಾರ್ ಜಗನ್ನಾಥ್ ಮೂಲಕ ಸರಕಾರಕ್ಕೆ ಮನವಿಪತ್ರ ನೀಡಲಾಯಿತು.