ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಜರ್ಮನ್ ಮಾದರಿ ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.ಅಭಿಮಾನೋತ್ಸವದ ಹಿನ್ನಲೆ ಶುಕ್ರವಾರ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗದ ಇತಿಹಾಸದಲ್ಲಿಯೇ ಅದ್ಭುತವಾದ ಕಾರ್ಯಕ್ರಮ ಇದಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ 10 ಲಕ್ಷಕ್ಕೂ ಹೆಚ್ಚು ಜನರ ಆಗಮಿಸಲಿದ್ದಾರೆ. ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ 10 ಜಿಲ್ಲೆಗಳಿಂದ ಅತಿ ಹೆಚ್ಚು ಸಂಖ್ಯೆ ಜನ ಪಾಲ್ಗೊಳ್ಳಲಿದ್ದಾರೆ. ಪಕ್ಷಾತೀತವಾಗಿ ಜನರು ಧಾವಿಸಲಿದ್ದಾರೆ ಎಂದರು.
ಯಡಿಯೂರಪ್ಪ ಅವರ ರಾಜಕೀಯ ಪಯಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಖಾತೆ ತೆರೆದು ಮುಖ್ಯಮಂತ್ರಿಯಾಗಿದ್ದಾರೆ. ಅವರಲ್ಲಿದ್ದ ಹೋರಾಟದ ಮನೋಭಾವ ಅವರನ್ನು ಬಹುದೊಡ್ಡ ನಾಯಕರನ್ನಾಗಿ ಮಾಡಿದೆ. ರಾಜ್ಯ ರಾಜಕಾರಣದಲ್ಲಿ ಅವರು ಅಜಾತ ಶತ್ರು. ಶೋಷಿತರು, ಅಲ್ಪ ಸಂಖ್ಯಾತರು, ಹಿಂದುಳಿದವರಿಗೆ ವಿಶೇಷ ಕಾರ್ಯಕ್ರಮಗಳ ನೀಡಿದ್ದಾರೆ. ಅವರ 50 ವರ್ಷದ ರಾಜಕೀಯ ಹಾದಿ ಸುಲಭವಾಗಿರಲಿಲ್ಲವೆಂದು ತಿಪ್ಪಾರೆಡ್ಡಿ ಹೇಳಿದರು.ಯಡಿಯೂರಪ್ಪ ಅವರ ಜೀವನ ಸಾರ್ಥಕ ಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿ ಆಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಜನರಿಗೂ ಊಟ, ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ವಾಲೆಂಟೈರ್ಸ್ ಗಳು ಇರಲಿದ್ದಾರೆ. ಹೈದ್ರಾಬಾದ್ ನಿಂದ ಸಿಬ್ಬಂದಿಗಳು ಆಗಮಿಸಿ ಪೆಂಡಾಲ್ ನ ಅಚ್ಚುಕಟ್ಟಾಗಿ ರೂಪಿಸುತ್ತಿದ್ದಾರೆ. ಬಿಸಿಲು ಹೆಚ್ಚಿರೋದ್ರಿಂದ ವೇದಿಕೆಯೇ ಈ ಬಾರಿ ವಿಶಿಷ್ಟವಾಗಿರಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಅಭಿಮಾನೋತ್ಸವದ ಉಸ್ತುವಾರಿ ತಮ್ಮೇಶ್ ಗೌಡ ಮಾತನಾಡಿ, ಅಭಿಮಾನೋತ್ಸವ ಬಿಜೆಪಿ ಕಾರ್ಯಕ್ರಮವಾಗಿರದೆ, ಪಕ್ಷಾತೀತವಾಗಿ ಜನ ಜಮಾಯಿಸಲಿದ್ದಾರೆ. ರಾಜ್ಯ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಒಂದು ಸಾವಿರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಎಲ್ಲರನ್ನು ಗೌರವಿಸಲಾಗುವುದು. ಬೇಸಗೆ ಇರುವುದರಿಂದ ಪೆಂಡಾಲ್ಗೆ ವಿಶೇಷ ಗಮನ ನೀಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿಭಾಗ ಸಹ ಪ್ರಭಾರಿ ಎ.ಮುರಳಿ, ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ಗುಂಡಾರ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಂಪತ್ ಕುಮಾರ್, ಮಂಡಲ ಅಧ್ಯಕ್ಷ ನಾಗರಾಜ್ ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ, ಅರುಣ್ ತ್ರಿಪುರ, ಇದ್ದರು. ಎಸ್ಪಿ ರಂಜಿತ್ ಕುಮಾರ್ ಬಂಡಾರು, ಭದ್ರತೆ ಕುರಿತು ಪರಿಶೀಲಿಸಿದರು.