ಕನ್ನಡಪ್ರಭವಾರ್ತೆ ಬೆಳ್ತಂಗಡಿ
ಜರ್ಮನಿಯ ಮೆಜ್ ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ 15 ಮಂದಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಯೋಗ ಮತ್ತು ನ್ಯಾಚುರೊಪತಿ ತರಬೇತಿ ಶಿಬಿರವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಯೋಗ ಹಾಲ್ನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ ನೀಡಿದರು. ಶಿಬಿರದ ಹಿನ್ನೆಲೆ ಮತ್ತು ಉದ್ದೇಶಗಳನ್ನು ಉಪಪ್ರಾಚಾರ್ಯೆ ಡಾ. ಸುಜಾತಾ ವಿವರಿಸಿದರು. ವಿದೇಶಿ ವ್ಯವಹಾರಗಳ ಡೀನ್ ಡಾ. ಬಿಂದು ಸ್ವಾಗತ ಭಾಷಣ ಮಾಡಿದರು.ಯೋಗ ಡೀನ್ ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಮುಖ್ಯ ವಕ್ತಾರರಾಗಿ ಭಾಗವಹಿಸಿದರು. ಪೌಷ್ಟಿಕಾಹಾರ ಮತ್ತು ಎನರ್ಜಿ ಮೆಡಿಸಿನ್ ಡೀನ್ ಡಾ. ಗೀತಾ ಬಿ. ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಯೋಗ ವಿಭಾಗದ ಉದಯಸುಬ್ರಹ್ಮಣ್ಯ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಡಾ. ಅನನ್ಯಾ ನಿರ್ವಹಿಸಿದರು.ಶಿಬಿರದಲ್ಲಿ ಯೋಗ ಚಿಕಿತ್ಸೆ, ಧ್ಯಾನ, ಆಧುನಿಕ ಯೋಗ, ನ್ಯಾಚುರೊಪತಿ, ಮಾನವ ಶರೀರ ರಚನೆ ಹಾಗೂ ಭೌತಶಾಸ್ತ್ರ, ಪೌಷ್ಟಿಕಾಹಾರ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಎಂಓಯು ಒಡಂಬಡಿಕೆಯಡಿ ಜರ್ಮನ್ ವಿದ್ಯಾರ್ಥಿಗಳು ಭಾರತೀಯ ಯೋಗ ಮತ್ತು ನ್ಯಾಚುರೊಪತಿ ವಿಜ್ಞಾನವನ್ನು ಅಧ್ಯಯನ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದರು.
ಈ ತರಬೇತಿ ಶಿಬಿರವು ಜರ್ಮನ್ ಹಾಗೂ ಭಾರತೀಯ ಆರೋಗ್ಯ ವಿಜ್ಞಾನಗಳ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ ಹೇಳಿದರು.