ಕಡ್ಡಾಯ ಬಿತ್ತನೆ ಬೀಜ ರಶೀದಿ ಪಡೆಯಿರಿ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

| Published : May 29 2025, 02:53 AM IST

ಕಡ್ಡಾಯ ಬಿತ್ತನೆ ಬೀಜ ರಶೀದಿ ಪಡೆಯಿರಿ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಯೋಜನೆಗಳ ಲಾಭವನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಕೃಷಿ ಇಲಾಖೆಗೆ ಡಿಸಿ ತಾಕೀತು । ಕಳಪೆ ಬೀಜ, ಗೊಬ್ಬರ ಮಾರಾಟ ತಡೆಗೆ ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರಿಗೆ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಯೋಜನೆಗಳ ಲಾಭವನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಹಾಗೂ ಇಲಾಖೆಯ ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಎಂದರು.

ಜಿಲ್ಲೆಯ ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಬೇಕು. ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬೇಕು. ಬೀಜಗಳನ್ನು ರೈತರು ಖರೀದಿಸಿದ ನಂತರ ಕಡ್ಡಾಯವಾಗಿ ರಶೀದಿ ಪಡೆದು, ಅದನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ತಾಲೂಕು ಆಡಳಿತ, ರೈತರ ಬೇಡಿಕೆಗನುಗುಣವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರ ಪೂರೈಸಲು ಸನ್ನದ್ಧವಾಗಿದೆ. ಈಗಾಗಲೇ ತಾಲ್ಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೂ ಈ ಕುರಿತು ತರಬೇತಿ ನೀಡಲಾಗಿದೆ. ಕಳಪೆ ಗುಣಮಟ್ಟದ ಪರಿಕರ ಮಾರಾಟ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತರು ಸಹ ಯಾವುದೇ ಕೃಷಿ ಪರಿಕರಗಳನ್ನು ಮುಖ್ಯವಾಗಿ ಬಿತ್ತನೆ ಬೀಜಗಳನ್ನು ಅನಧಿಕೃತ ಅಥವಾ ಪರವಾನಿಗೆ ಇಲ್ಲದ ಮಾರಾಟಗಾರರಿಂದ ಖರೀದಿಸಬಾರದು. ತಾಲೂಕಿನ ಯಾವುದೇ ಭಾಗದಲ್ಲಿ ಅಂತಹ ಕಾನೂನು ಬಾಹಿರ ಕೃಷಿ ಪರಿಕರಗಳ ಸಂಗ್ರಹ, ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲಿ ಮಾಹಿತಿ ನೀಡಬೇಕು. ನಕಲಿ ಸಂಸ್ಥೆಗಳು, ಅನಧಿಕೃತ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಹೊರ ಜಿಲ್ಲೆಗಳಿಗೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ, ಸಾಗಾಟವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ರೈತರು ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್‌ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್‍ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದೆ ಎಂದು ತಿಳಿಸಿದರು.

ಕೃಷಿ ತಜ್ಞರ ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬೇಕು. ಆದರೆ, ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್‌ ರಸಗೊಬ್ಬರಗಳನ್ನು 4:2:1ರ ಅನುಪಾತದಲ್ಲಿ ಬಳಸಬೇಕು. ಈಚಿನ ವರ್ಷಗಳಲ್ಲಿ ರೈತರು ಬಳಸುತ್ತಿರುವ ರಸಗೊಬ್ಬರಗಳ ಅನುಪಾತವು ರಾಜ್ಯದಲ್ಲಿ 5:3:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ಗೊಬ್ಬರಗಳ ಬಳಕೆ ಉತ್ತೇಜಿಸಲು ಪೊಟ್ಯಾಷ್‌ ಯುಕ್ತ ಸಂಯುಕ್ತ ರಸಗೊಬ್ಬರಗಳ ಬಳಕೆ ಪ್ರೇರೇಪಿಸುವುದು ಮುಖ್ಯ ಎಂದರು.

ವಿವಿಧ ಹಂತಗಳಲ್ಲಿ ಜರುಗುವ ತರಬೇತಿ, ಕಾರ್ಯಾಗಾರ ಹಾಗೂ ಅಭಿಯಾನಗಳಲ್ಲಿ ಕಡ್ಡಾಯವಾಗಿ ರೈತರು, ರಸಗೊಬ್ಬರ ಮಾರಾಟಗಾರರಿಗೆ ಅರಿವು ಮೂಡಿಸಬೇಕು. ಮಾರಾಟಗಾರರು ರಸಗೊಬ್ಬರ ಮಾರುವಾಗ ಪೊಟ್ಯಾಷ್ ಯುಕ್ತ ಸಂಯುಕ್ತ ರಸಗೊಬ್ಬರಗಳ ಉಪಯುಕ್ತತೆ ಬಗ್ಗೆ ರೈತರಿಗೆ ತಿಳಿಸಬೇಕು. ಯೂರಿಯಾ ಗೊಬ್ಬರವನ್ನು ಇಂಡಸ್ಟ್ರಿಯಲ್‍ಗಳಿಗೆ ಮಾರಾಟ ಮಾಡಬಾರದು ಎಂದು ಕೃಷಿ ಇಲಾಖೆಗೆ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಉಪ ಕೃಷಿ ನಿರ್ದೇಶಕ ಅಶೋಕ, ಲೀಡ್ ಫರ್ಟಿಲೈಸರ್ಸ್ ಸಂಸ್ಥೆ ಅಧಿಕಾರಿ ಉಮೇಶ, ರಸಗೊಬ್ಬರ ಪೂರೈಸುವ ಸಂಸ್ಥೆಯ ಮಾಲೀಕರು, ಬಿತ್ತನೆ ಬೀಜ ಸರಬರಾಜು ಮಾಡುವ ಮಾಲೀಕರು, ವಿತರಕರು ಇದ್ದರು.