ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರ ಕಳೆದ ಹಲವಾರು ದಶಕಗಳಿಂದ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ನೃತ್ಯ ಕಲೆಯನ್ನು ಸಮಾನವಾಗಿ ಎಲ್ಲರಿಗೂ ನೀಡಿ, ಅವರನ್ನು ಕಲಾವಿದರನ್ನಾಗಿ ರೂಪಿಸುವಲ್ಲಿ ನೃತ್ಯನಿಕೇತನದ ಪಾತ್ರ ಹಿರಿದು. ಇಂತಹ ನೃತ್ಯ ನಿಕೇತನ ಇನ್ನೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಕಲೆಯನ್ನು ಉಜ್ಚಲವಾಗಿ ಬೆಳೆಸಲಿ ಎಂದು ನರಹರಿ ನಗರದ ಕರಿ ಬಸವೇಶ್ವರ ಸ್ವಾಮಿ ಸೇವಾಟ್ರಸ್ಟ್ ಅಧ್ಯಕ್ಷ ವೀರಭದ್ರಸ್ವಾಮಿ ಶುಭ ಹಾರೈಸಿದರು.

ನರಹರಿ ನಗರದ ಶ್ರೀಕರಿಬಸವೇಶ್ವರರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನಾ ಕಾರ್ಯದಲ್ಲಿ ನೃತ್ಯನಿಕೇತನ ವಿದ್ಯಾರ್ಥಿಗಳು ದೇವಿರೂಪಕ ಪ್ರದರ್ಶನವನ್ನು ಪ್ರದರ್ಶಿಸಿದ್ದು, ಎಲ್ಲರಲ್ಲೂ ಭಕ್ತಿ ಅರಳುವಂತೆ ಮಾಡಿದರು. ಈ ಸಂದರ್ಭದಲ್ಲಿ ನೃತ್ಯ ನಿಕೇತನದ ವಿದ್ಯಾರ್ಥಿಗಳ ನೃತ್ಯ, ಸಂಗೀತ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು. ನೃತ್ಯಕಲೆ ಇಂದು ಎಲ್ಲರನ್ನೂ ಸುಲಭವಾಗಿ ತಲುಪಲು ಇದುಕಾರಣವಾಗಿದೆ. ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟಿದ್ದು ಎಲ್ಲರಿಗೂ ಧನ್ಯವಾದ ಅರ್ಪಿಸಲಾಗುವುದು ಎಂದರು.

ನೃತ್ಯನಿಕೇತನದ ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್ ಮಾತನಾಡಿ, ದೇವಸ್ಥಾನದ ಉದ್ಘಾಟನಾ ಸಮಾರಂಭ ಹಿನ್ನೆಲೆಯಲ್ಲಿ ಭಕ್ತಿ ಪ್ರಧಾನವಾದ ನಾಟಕವನ್ನು ಅಭಿನಯಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ದೇವಿಮಹಾತ್ಮೆ ನಾಟಕ ಉತ್ತಮವಾಗಿ ಮೂಡಿಬರಲು ಕಲಾವಿದರು ಕಾರಣರಾದರೆ, ಕಲಾವಿದರಿಗೆ ತರಬೇತಿಯನ್ನು ನೀಡಿದ ನೃತ್ಯ ನಿಕೇತನದ ಪ್ರಾಚಾರ್ಯೆ ಸುಧಾಮೂರ್ತಿಯವರು ಕಾರಣಕರ್ತರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕ ಪ್ರದರ್ಶನಕ್ಕೆ ಅವಕಾಶವನ್ನು ನೀಡಿದೆ. ದೇವಿಮಹಾತ್ಮೆ ಭಕ್ತಿಪ್ರಧಾನವಾದ ನಾಟಕವಾಗಿದ್ದು, ಎಲ್ಲರೂ ನಾಟಕಪ್ರದರ್ಶನದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದ್ದು ಸಂತಸ ತಂದಿದೆ ಎಂದರು.

ಜಿ.ಟಿ.ವೀರಭದ್ರಸ್ವಾಮಿ, ಸಿ.ಟಿ.ಶ್ರೀನಿವಾಸ್, ಇಂಡಸ್‌ ಚಿಕ್ಕಣ್ಣ, ಜಿ.ಟಿ.ಶಶಿಧರ, ಎನ್.ಮಂಜುನಾಥ, ಟ್ರಸ್ಟಿಗಳಾದ ಮಾರುತಿ, ದಯಾನಂದ ಪ್ರಹ್ಲಾದ್, ಟಿ.ರಾಜಣ್ಣ, ಎಂ.ಎನ್.ಮೃತ್ಯುಂಜಯ, ಕೆಂಚವೀರನಹಳ್ಳಿ ಎನ್.ಮಲ್ಲೇಶ್, ನಾಗರತ್ನಮ್ಮ, ಲತಾ, ಮಂಜುಳಮ್ಮ, ನಾಗಣ್ಣ ಮುಂತಾದವರು ಭಾಗವಹಿಸಿದ್ದರು.