ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಸಲಹೆ

ಕನ್ನಡಪ್ರಭ ವಾರ್ತೆ ವಿಜಯಪುರ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾನಸಿಕ ಆರೋಗ್ಯ ಕಾಪಾಡುವುದು ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಸಮಾಜ ಕಾರ್ಯ ವಿಭಾಗ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಪಿಎಮ್ -ಉಷಾ, ಭಾರತದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದೊಂದಿಗೆ ಮಾನಸಿಕ ಬೆಂಬಲ ಹೊಂದಲು ಆಪ್ತ ಸಮಾಲೋಚನೆ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಪರಿಣಾಮವಾಗಿ ವಿದ್ಯಾರ್ಥಿನಿಯರು ವಿವಿಧ ಕಾರಣಗಳಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಮಸ್ಯೆಗಳನ್ನು ಎದುರಿಸಲು ಮನೋಧೈರ್ಯ ಕೊರತೆಯಿಂದ ದುಡುಕು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಾನಸಿಕ ಸಮಸ್ಯೆಗಳಿಗಾಗಿ ಆಪ್ತಸಮಾಲೋಚನಾ ಸೇವೆ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಪುರದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಂತೋಷ ರಾಮದುರ್ಗ ಮಾತನಾಡಿ, ಮಾನಸಿಕ ಪ್ರಥಮ ಚಿಕಿತ್ಸೆ, ಒತ್ತಡ ಅಥವಾ ತುರ್ತುಸ್ಥಿತಿಯ ಸಂದರ್ಭದಲ್ಲಿರುವವರಿಗೆ ನೀಡಲಾಗುವ ತಕ್ಷಣದ ಸಹಾಯವಾಗಿದೆ. ಮಾನವ ನಿರ್ಮಿತ ವಿಪತ್ತು, ಯುದ್ಧ, ಅಪಘಾತ ಅಥವಾ ವೈಯಕ್ತಿಕ ನಷ್ಟದಿಂದ ಬಳಲುವವರಿಗೆ ಇದು ಮಾನವೀಯ ಹಾಗೂ ಪ್ರಾಯೋಗಿಕ ಬೆಂಬಲವಾಗಿದೆ. ಸುರಕ್ಷತೆ, ಶಾಂತಿ, ಭರವಸೆ ಮತ್ತು ಆತ್ಮವಿಶ್ವಾಸ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ವಿಜಯಪುರದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ.ಗೌತಮಿ ಎಸ್.ಜಿ. ಮಾತನಾಡಿ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಸಂಪರ್ಕ, ಕುಟುಂಬ-ಸ್ನೇಹಿತರ ಬೆಂಬಲ ಮತ್ತು ಅಗತ್ಯವಿದ್ದಾಗ ವೃತ್ತಿಪರರ ಸಹಾಯ ಪಡೆಯುವುದರಿಂದ ಮಾನಸಿಕ ಒತ್ತಡ ನಿಭಾಯಿಸಬಹುದು. ಅಷ್ಟೇ ಅಲ್ಲದೇ ಆರೋಗ್ಯಕರ ಮನೋಭಾವವು ವ್ಯಕ್ತಿಯ ಉತ್ಪಾದಕತೆ ಮತ್ತು ಸಮತೋಲನಯುತ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದರು.

ಡಿಮ್ಯಾನ್ಸ್‌ ವಿಭಾಗದ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ್ ಪಾಟೀಲ ಮಾತನಾಡಿ, ಇಂದಿನ ಒತ್ತಡಭರಿತ ಜೀವನದಲ್ಲಿ ಮಹಿಳೆಯರು ಸ್ವ-ಆರೈಕೆಗೆ ಆದ್ಯತೆ ನೀಡುವುದು ಅತ್ಯಂತ ಅವಶ್ಯಕ. ದೈಹಿಕ ಮತ್ತು ಭಾವನಾತ್ಮಕವಾಗಿ ಸ್ವತಃ ತಮಗಾಗಿ ತಾವೇ ಸಮಯ ನೀಡದಿದ್ದರೆ ಅದು ಆರೋಗ್ಯ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸ್ವ-ಅರಿವು ಮತ್ತು ಸ್ವ-ಆರೈಕೆಯ ಮೂಲಕ ಮಾತ್ರ ವ್ಯಕ್ತಿ ಉತ್ತಮ ಯೋಗಕ್ಷೇಮ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಸಮಾಜ ಕಾರ್ಯ ವಿಭಾಗದ ಡಾ.ಕಲಾವತಿ ಎಚ್ ಕಾಂಬಳೆ, ಡಾ.ರಮೇಶ ಸೊನಕಾಂಬಳೆ, ಶರಣಬಸು ಕೊಡಬಾಗಿ ಮತ್ತು ಎಸ್.ಆರ್ ಪಾಟೀಲ ಸಮಾಜಕಾರ್ಯ ವಿಭಾಗದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಸ್ನಾತಕ ವಿಭಾಗಗಳ ಉಪನ್ಯಾಸಕರು ಇದ್ದರು. ಕಾರ್ಯಗಾರದ ಸಂಯೋಜಕ ಪ್ರೊ.ಜಿ.ಬಿ ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ ಸ್ವಾಗತಿಸಿ, ಡಾ.ಶಿವಲಿಂಗ ಮೇತ್ರಿ ನಿರೂಪಿಸಿ, ವಂದಿಸಿದರು.