ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬ್ಯಾಡರಹಳ್ಳಿಯ ಗ್ರಾಪಂ ಅವರಣದಲ್ಲಿ ಶುಕ್ರವಾರ ಬಹಿಷ್ಕಾರ ಪದ್ಧತಿ ನಿರ್ಮೂಲನಾ ತಡೆ ಜಾಗೃತಿ ಕಾರ್ಯಕ್ರಮ ನಡೆಯಿತು.ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಗ್ರಾಪಂ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಎಂಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಮಾತನಾಡಿ, ಸಂವಿಧಾನದಡಿ 1982ರಿಂದಲೂ ಕಾನೂನು ಸೇವಾ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಆಗತ್ಯ ಉಳ್ಳವರಿಗೆ ಉಚಿತವಾಗಿ ವಕೀಲರನ್ನು ನೇಮಿಸಿ ತ್ವರಿತವಾಗಿ ನ್ಯಾಯ ದೊರಕಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು ದೈನಂದಿನ ಜೀವನದಲ್ಲಿ ಕಾನೂನನ್ನು ಗೌರವಿಸಬೇಕು. ಆಗ ಕಾನೂನು ಸಹ ನಮ್ಮನ್ನು ರಕ್ಷಣೆ ಮಾಡಲಿದೆ. ಕಾನೂನನ್ನು ಉಲ್ಲಂಘಿಸಿದಾಗ ತಪ್ಪಿತಸ್ಥರಿಗೆ ನ್ಯಾಯಾಲಯವು ಶಿಕ್ಷಗೆ ಗುರಿಪಡಿಸುತ್ತದೆ ಎಂದು ತಿಳಿಸಿದರು.ಪ್ಯಾನಲ್ ವಕೀಲ ಎಂ.ಪಿ.ಮೋಹನ್ ಕುಮಾರ್ ಮಾತನಾಡಿ, ಸಾಮಾಜಿಕ ಬಹಿಷ್ಕಾರ ನಿಷೇಧ ಬಗ್ಗೆ ಸ್ವಾತಂತ್ರ್ಯ ಪೂರ್ವ 1935ರಲ್ಲಿಯೇ ಚರ್ಚೆಯಾಗಿದೆ. ಮೇಲ್ನೋಟಕ್ಕೆ ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ನಮ್ಮಲ್ಲಿ ಇಲ್ಲ ಎಂದುಕೊಂಡರೂ ಸಹ ಕೆಲವೆಡೆ ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ಎಸಗಿ ಬಹಿಷ್ಕಾರ ಹಾಕಿದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ಸಮಾಜದಲ್ಲಿನ ಕೆಟ್ಟ ಪಿಡುಗು ನಾಶಪಡಿಸಲು ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕಾನೂನುಗಳನ್ನು ರೂಪಿಸುವ ಮೂಲಕ ಸಮಾಜದಲ್ಲಿ ತುಳಿತಕ್ಕೆ ಸಿಲುಕಿದವರ ಮೇಲೆತ್ತಲು ಶ್ರಮವಹಿಸಿದ್ದಾರೆ. ಬಹಿಷ್ಕಾರ ಪದ್ಧತಿಯು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ಬಹಿಷ್ಕಾರ ಹಾಕುವವರಿಗೆ 1 ಲಕ್ಷ ರು. ದಂಡ ಮತ್ತು 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಜಾರಿಯಲ್ಲಿದೆ. ಸಮಾಜದಲ್ಲಿ ಎಲ್ಲಾ ಜನರು ಯಾವುದೇ ಬೇಧ ಭಾವವಿಲ್ಲದೇ ಪ್ರತಿಯೊಂದು ಜೀವಿಗಳನ್ನು ಸಮಾನವಾಗಿ ಕಾಣಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಅಲುಮೇಲಮ್ಮ, ಉಪಾಧ್ಯಕ್ಷ ದಾಸಬೋಯಿ, ಅಪರ ಸರ್ಕಾರಿ ವಕೀಲರಾದ ಎಂ.ಎಸ್. ಶ್ರೀಕಂಠಸ್ವಾಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ, ಕಾರ್ಯದರ್ಶಿ ಕಾಳರಾಜು, ಸಂಪನ್ಮೂಲ ಭಾಷಣಕಾರ ಎಂ.ಪಿ.ಮೋಹನ್ ಕುಮಾರ್, ನಾರಾಯಣ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಕಾರ್ಯದರ್ಶಿ ಎಂ.ನಟೇಶ್, ಗ್ರಾಪಂ ಸದಸ್ಯರಾದ ಅನಿಲ್ ಕುಮಾರ್ ಸೇರಿ ಹಲವರು ಭಾಗವಹಿಸಿದ್ದರು.