ಶಾಲಾ ಕಾಂಪೌಂಡ್ ನಿಂದ ಗೇಟ್ ಕಳಚಿ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಕುಶಾಲನಗರ: ಶಾಲಾ ಕಾಂಪೌಂಡ್ ನಿಂದ ಗೇಟ್ ಕಳಚಿ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಬಸವನಹಳ್ಳಿ ಹಾಡಿಯ ಸತೀಶ ಮತ್ತು ಪವಿತ್ರ ದಂಪತಿ ಪುತ್ರಿ ಅಪೂರ್ವ (4) ಮೃತ ಬಾಲಕಿ. ಮನೆಯ ಸಮೀಪ ಇರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುವ ತನ್ನ ಸಹೋದರಿಯನ್ನು ಕರೆದೊಯ್ಯಲು ಬಾಲಕಿ ಪ್ರತಿ ದಿನ ಗೇಟ್ ಬಳಿ ಬರುವುದು, ಆಟವಾಡುವುದು ವಾಡಿಕೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ ಶುಕ್ರವಾರ ಸಂಜೆ ವೇಳೆ ಗೇಟ್ ಬಳಿ ಬಂದಾಗ ಶಿಥಿಲವಾಗಿದ್ದ ಕಾಂಪೌಂಡ್ ನಿಂದ ಬೃಹತ್ ಕಬ್ಬಿಣದ ಗೇಟ್ ಗೋಡೆ ಸಹಿತ ಕಳಚಿ ಬಿದ್ದು ಬಾಲಕಿ ತಲೆ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಗಿರಿಜನ ಮುಖಂಡ ಆರ್.ಕೆ.ಚಂದ್ರ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕ್ಷೇತ್ರ ಶಾಸಕ ಡಾ ಮಂತರ್ ಗೌಡ ದೂರವಾಣಿ ಮೂಲಕ ಮೃತ ಬಾಲಕಿ ಪೋಷಕರನ್ನು ಸಂಪರ್ಕಿಸಿ ಸಾಂತ್ವನ ಹೇಳಿದರು.