ಸಾರಾಂಶ
ಹೊಸಕೋಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ. ೭೫ರಷ್ಟು ಹೆಣ್ಣು ಮಕ್ಕಳು ವಿದ್ಯೆ ಕಲಿಯುತಿದ್ದರೆ ಶೇ. ೭೫ರಷ್ಟು ಮಹಿಳಾ ಉಪನ್ಯಾಸಕರಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಐಕ್ಯುಎಸಿ, ಕ್ರೀಡೆ, ಎನ್ನೆಸ್ಸೆಸ್, ಎನ್ಸಿಸಿ, ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಆಪರೇಷನ್ ಸಿಂದೂರ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಹಿಳೆಯರೇ ಮಾಹಿತಿ ನೀಡಿದ್ದು ದೇಶದಲ್ಲಿ ಮಹಿಳೆಯರಿಗೆ ನೀಡುವ ಗೌರವ ಸೂಚಿಸುತ್ತದೆ. ಕಾಲೇಜಿನ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.ಮಾಜಿ ಸಂಸದ ಡಾ ಎಲ್.ಹನುಮಂತಪ್ಪ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕಾಲೇಜು ವಿದ್ಯಾಭ್ಯಾಸ ಕಲಿತು ಜೀವನದಲ್ಲಿ ಸಾಧನೆ ಮಾಡುವುದು ಅಸಾಧ್ಯ. ಎಐ ತಂತ್ರಜ್ಞಾನ ದಿನೇದಿನೇ ಬೆಳೆಯುತ್ತಿದೆ. ಪಂಡಿತರ ಮಾತಿನಂತೆ ದೇಶದಲ್ಲಿ ಸುಮಾರು 86 ಲಕ್ಷ ಜನ ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ. ಆದರೆ ಎಐ ಪ್ರಕಾರ ಎಐ ತಂತ್ರಜ್ಞಾನ ಅರಿತರೆ ದೇಶದಲ್ಲಿ 97 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ವರದಿಯೂ ಇದೆ, ಆದ್ದರಿಂದ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ, ಕ್ರಿಯಾತ್ಮಕತೆ ರೂಢಿಸಿಕೊಳ್ಳಬೇಕು ಎಂದರು.
ಕೇಂಬ್ರಿಡ್ಜ್ ಇನ್ಸ್ಟ್ಯೂಟ್ನ ಛೇರ್ಮನ್ ಮೋಹನ್ ಬಾಬು ಮಾತನಾಡಿ, ವಿದ್ಯಾರ್ಥಿಗಳ ಆಲೋಚನೆ ವೈಜ್ಞಾನಿಕವಾಗಿರಬೇಕು. ಸರ್ಕಾರ ನೂತನ ಆವಿಷ್ಕಾರಕ್ಕೆ ಅವಕಾಶ ನೀಡುತ್ತಿದೆ. ಆದರೆ ನಮ್ಮ ದೇಶದ ವಿದ್ಯಾರ್ಥಿಗಳು ಪ್ರಾಡಕ್ಟ್ ಬೇಸ್ಡ್ ಸ್ಟಾರ್ಟಪ್ ಬದಲಿ ಸರ್ವಿಸ್ ಬೇಸ್ಡ್ ಸ್ಟಾರ್ಟಪ್ ಗಳಿಗೆ ಮೊರೆ ಹೋಗುವ ಮೂಲಕ ಜಮೋಟೊ, ಸ್ವಿಗ್ಗಿ ಯಂತಹ ಸರ್ವಿಸ್ಗೆ ಮೊರೆ ಹೋಗುತಿದ್ದಾರೆ. ವಿದ್ಯಾರ್ಥಿಗಳು ನಮ್ಮ ಕನಸಿನ ಕಲಿಕೆಗೆ ಒತ್ತು ನೀಡುತ್ತಿದ್ದೇವೆಯೇ ಎಂಬುದನ್ನು ಅರಿತು ಮುಂದುವರಿಯಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಮ್ಮ ಇನ್ಸ್ಟ್ಯೂಟ್ನಿಂದ ಸ್ಕಿಲ್ ಲ್ಯಾಬ್ ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದರು.ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದ ನಾಗಮ್ಮರನ್ನು ಸನ್ಮಾನಿಸಲಾಯಿತು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಗೌತಮ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ.ಸುಬ್ಬರಾಜ್, ಸಿಡಿಸಿ ಸದಸ್ಯರಾದ ಸುರೇಶ್, ಎಚ್.ಎಸ್.ಗೋಪಾಲ್, ಮಧು, ಅರುಣ್, ಸೌಮ್ಯ, ಆಕಿಲ್ ಅಹಮದ್, ವಿಜಿ, ಪ್ರಂಶುಪಾಲ ಡಾ. ರಾಮಲಿಂಗಪ್ಪ ಟಿ ಬೇಗೂರ್, ಬೋಧಕ/ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಫೋಟೋ: 24 ಹೆಚ್ಎಸ್ಕೆ 1ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಐಕ್ಯುಎಸಿ, ಕ್ರೀಡೆ, ಎನ್ನೆಸ್ಸೆಸ್, ಎನ್ಸಿಸಿ, ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.