- ದೂಡಾ ಸಾಮಾನ್ಯ ಸಭೆಯಲ್ಲಿ ಆನ್‌ಲೈನ್‌ ಮೂಲಕ ಜಿಲ್ಲಾ ಸಚಿವ ಎಸ್‌ಎಸ್‌ಎಂ ಸೂಚನೆ

- - -

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಜಿಐಎಸ್ ಆಧಾರಿತ ಅಂತಿಮ ಮಹಾಯೋಜನೆ (ಪರಿಷ್ಕೃತ-3)- 2041ಕ್ಕೆ ಪ್ರಸ್ತಾಪನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲು ದೂಡಾ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಗರದ ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇತ್ತೀಚೆಗೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಝೂಮ್ ಮೀಟಿಂಗ್‌ನಲ್ಲಿ ಪಾಲ್ಗೊಂಡು, ಅಂತಿಮ ಮಹಾ ಯೋಜನೆಗೆ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲು ನೀಡಿದ ಸೂಚನೆಗೆ ಸಭೆ ಒಮ್ಮತದಿಂದ ಸಮ್ಮತಿಸಿತು.

ಮಹಾ ಯೋಜನೆ ನಕ್ಷೆಯಲ್ಲಿ ಕಾಯ್ದಿರಿಸಿದಂತೆ ದಾವಣಗೆರೆ ನಗರದ ಬಸಾಪುರ ರಸ್ತೆಯಿಂದ ಎಲೆಬೇತೂರು ರಸ್ತೆವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು, ಪಾಲಿಕೆ ಕಚೇರಿ ಮುಂಭಾಗ ಪಾದಚಾರಿಗಳಿಗೆ ಅನುಕೂಲ ಆಗುವಂತೆ ಸ್ಕೈವಾಕ್ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ದೂಡಾ ಅಧ್ಯಕ್ಷ ಹಾಗೂ ಆಯುಕ್ತರಿಗೆ ಸಚಿವರು ಸಲಹೆ ನೀಡಿದರು.


ದಾವಣಗೆರೆ ತಾಲೂಕಿನ ಆವರಗೊಳ್ಳ ಹಾಗೂ ದೊಡ್ಡ ಬೂದಿಹಾಳ್ ಸುತ್ತಮುತ್ತ ಒಟ್ಟು 77 ಎಕರೆ ಜಮೀನನ್ನು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ನಿರ್ಮಿಸಲು ರೈತರೊಂದಿಗೆ ಚರ್ಚಿಸಿ. ನೇರ ಖರೀದಿ ಅಥವಾ ಶೇ.50:50 ಅನುಪಾತದಲ್ಲಿ ಕ್ರಮ ಕೈಗೊಳ್ಳಲು ಮುಂದಾಗುವಂತೆಯೂ ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಣ್ಣ ಅವರಿಗೆ ಸಚಿವರು ಸೂಚಿಸಿದರು.

ಈ ಸಂದರ್ಭ ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ, ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಸದಸ್ಯರಾದ ವಾಣಿ ಬಕ್ಕೇಶ ನ್ಯಾಮತಿ, ಮಂಜುನಾಥ, ಹರೀಶ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಇದ್ದರು.

- - -

-5ಕೆಡಿವಿಜಿ11, 12.ಜೆಪಿಜಿ:

ದಾವಣಗೆರೆ ದೂಡಾ ಕಚೇರಿಯಲ್ಲಿ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆನ್‌ಲೈನ್ ಮೂಲಕ ಅಭಿವೃದ್ಧಿ ಕಾಮಗಾರಿ ಬಗ್ಗೆ ನಿರ್ದೇಶನ ನೀಡಿದರು.