ಸವಿತಾ ಸಮಾಜಕ್ಕೆ 1 ಎಕರೆ ಜಮೀನು ನೀಡಿ

| Published : Feb 06 2025, 11:48 PM IST

ಸಾರಾಂಶ

ಸವಿತಾ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಸರಕಾರವು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಸವಲತ್ತು ನೀಡಬೇಕು. ಹಾಗೂ ಶಿರಾ ತಾಲೂಕಿನಲ್ಲಿ ಸವಿತಾ ಸಮಾಜಕ್ಕೆ 1 ಎಕರೆ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಶಿರಾ ನಗರಸಭೆ ಆಶ್ರಯ ಸಮಿತಿ ಸದಸ್ಯ ಮಂಜುನಾಥ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಶಿರಾ ಸವಿತಾ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಸರಕಾರವು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಸವಲತ್ತು ನೀಡಬೇಕು. ಹಾಗೂ ಶಿರಾ ತಾಲೂಕಿನಲ್ಲಿ ಸವಿತಾ ಸಮಾಜಕ್ಕೆ 1 ಎಕರೆ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಶಿರಾ ನಗರಸಭೆ ಆಶ್ರಯ ಸಮಿತಿ ಸದಸ್ಯ ಮಂಜುನಾಥ್ ಮನವಿ ಮಾಡಿದರು. ಅವರು ನಗರದ ಮಿನಿವಿಧಾನ ಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಶಾಸಕ ಟಿ.ಬಿ.ಜಯಚಂದ್ರ ಅವರು ಸವಿತ ಸಮಾಜಕ್ಕೆ 20 ಗುಂಟೆ ಜಮೀನನ್ನು ಮಂಜೂರು ಮಾಡಿಸಿದ್ದರು. ಆದರೆ ಅದು ತಾಂತ್ರಿಕ ಕಾರಣಗಳಿಂದ ಲಭ್ಯವಾಗಿಲ್ಲ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಡತ ಇದ್ದು ಅದನ್ನು ಉಪವಿಭಾಗಾಧಿಕಾರಿಗಳು ಚರ್ಚಿಸಿ ಆದೇಶ ಮಾಡಬೇಕೆಂದು ತಿಳಿದು ಬಂದಿದ್ದು, ಈ ಹಿಂದೆ ನೀಡಿದ್ದ 20 ಗುಂಟೆ ಜಮೀನಾಗಲಿ ಅಥವಾ ಬೇರೆ ಕಡೆಯಲ್ಲಿ ಸುಮಾರು 1 ಎಕರೆ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಅವರು ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾಚನೆ ಸಲ್ಲಿಸಿ ಮಾತನಾಡಿ ಯಾವುದೇ ಸಮಾಜವೂ ಮೇಲಲ್ಲ, ಯಾವುದೂ ಕೀಳಲ್ಲ ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಯಾವುದೇ ಸಮಸ್ಯೆ ಇದ್ದರೂ ಹೇಳಿ ಸವಿತಾ ಸಮಾಜದ ಪರವಾಗಿ ನಾವು ಕೆಲಸ ಮಾಡುತ್ತೇವೆ . ಸ.ನ. 22 ರಲ್ಲಿ ಸುಮಾರು 13 ಸಮಾಜದವರಿಗೆ ಜಮೀನು ನೀಡಲು ಶಾಸಕರು ಅನುಮೋದನೆ ಮಾಡಿಸಿದ್ದರು. ಆದರೆ ಅದು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿ ಹೈಕೋರ್ಟ್ ನಿರ್ದೇರ್ಶನದಂತೆ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಎಲ್ಲಾ 13 ಸಮಾಜಕ್ಕೂ ಜಮೀನು ನೀಡಬೇಕು. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಕಸಬಾ ಕಂದಾಯ ನೀರಿಕ್ಷಕರಾದ ಕಾಂತರಾಜು, ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ಎಸ್ ನಾಗೇಶ್ ಬಾಬು, ಸದಾನಂದ, ಶ್ರೀನಿವಾಸ್, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಮಲ್ಲಿಕಾರ್ಜುನ್, ದೇವರಾಜು, ದಯಾನಂದ್, ರಘು ಸೇರಿದಂತೆ ಸವಿತಾ ಸಮಾಜದ ಮುಖಂಡರು ಭಾಗವಹಿಸಿದ್ದರು.