ಮುಳಗುಂದ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳನ್ನು ನೀಡುವುದು ತಾಯಂದಿರ ಕೈಯಲ್ಲಿದೆ ಎಂದು ರಾಜ್ಯ ವೀರಶೈವ ಲಿಂ. ಪಂ. ಮಹಿಳಾ ಘಟಕದ ಅಧ್ಯಕ್ಷೆ ವಸಂತ ಉಲ್ಲತ್ತಿ ಹೇಳಿದರು.
ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಶನಿವಾರ ಸಂಜೆ ಜರುಗಿದ ಸ್ಥಳೀಯ ರಾಣಿ ಚೆನ್ನಮ್ಮ ಮಹಿಳಾ ಹಿತರಕ್ಷಣಾ ಟ್ರಸ್ಟ್ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಎಲ್ಲಿ ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಪುರಾಣ ಪ್ರಸಿದ್ಧ ಮಾತಿದೆ. ಆ ನಿಟ್ಟಿನಲ್ಲಿ ಮಹಿಳೆಯರ ಗೌರವ, ಘನತೆಗೆ ನಮ್ಮ ಸಮಾಜ ಮಹತ್ವ ನೀಡಬೇಕು ಎಂದರು.ವಿ.ಲಿಂ. ಪಂ. ಸಂಘದ ರಾಜ್ಯ ಉಪಾಧ್ಯಕ್ಷೆ ಮಾಲಾದೇವಿ ದಂದರಗಿ ಉಪನ್ಯಾಸ ನೀಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರ ಸಾಧನೆಗಳನ್ನು ಗೌರವಿಸುವುದರ ಜೊತೆಗೆ ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣದ ಸಂಕಲ್ಪ ಬಲಪಡಿಸುವ ದಿನವಾಗಿದೆ.
ಸಾನ್ನಿಧ್ಯ ವಹಿಸಿದ್ದ ನೀಲಗುಂದ ಪ್ರಭುಲಿಂಗ ದೇವರು ಮಾತನಾಡಿ, ಜಗತ್ತಿನಲ್ಲಿ ಅತೀ ಶಕ್ತಿಶಾಲಿ ಯಾರು ಎಂದರೆ ಅದು ತಾಯಿ. ಮಹಿಳೆಯರು ಕುಟುಂಬ, ಶಿಕ್ಷಣ, ಆರೋಗ್ಯ, ರಾಜಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಇಂದಿನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಮುನ್ನಡೆಯುತ್ತಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯಂತ ಅಗತ್ಯವಾಗಿದ್ದು, ಅವರ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.ಈ ವೇಳೆ ಹಿರಿಯ ಮುಖಂಡ ರಾಮಣ್ಣ ಕಮಾಜಿ, ಕೃಷಿ ಸಾಧಕಿ ಮಂಗಳಾ ನೀಲಗುಂದ ಸೇರಿದಂತೆ ಇತರರು ಮಾತನಾಡಿದರು. ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನ ರಾಣಿ ಚೆನ್ನಮ್ಮ ಮಹಿಳಾ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷೆ ನಿರ್ಮಲಾ ಚಿಂಚಲಿ ವಹಿಸಿದ್ದರು. ನೀಲಮ್ಮ ಬೋಳನವರ, ನಿವೃತ್ತ ಶಿಕ್ಷಕಿ ವಿ.ಬಿ. ಪಾಟೀಲ, ಮಂಗಳಾ ಶೋಭಾ ಪಾಟೀಲ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಮಹಿಳೆಯರು ಇದ್ದರು.