ನರಸಿಂಹರಾಜಪುರದಲಿತರು ಸ್ವಾಭಿಮಾನಿಯಾಗಿ ಬದುಕಲು ಸರ್ಕಾರ ನಮಗೆ ಭೂಮಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯಿಂದ ತಾಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ಪ್ರಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಲಿತರು ಸ್ವಾಭಿಮಾನಿಯಾಗಿ ಬದುಕಲು ಸರ್ಕಾರ ನಮಗೆ ಭೂಮಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಆಗ್ರಹಿಸಿದರು.

ಸೋಮವಾರ ತಾಲೂಕು ಕಚೇರಿ ಎದುರು ದಸಂಸ ( ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ಭೂಮಿಗಾಗಿ ಹೋರಾಟ ಎಂಬ ಘೋಷಣೆಯೊಂದಿಗೆ ಪ್ರಾರಂಭಿಸಿರುವ ಆಹೋ ರಾತ್ರಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರೊ. ಬಿ.ಕೃಷ್ಣಪ್ಪ 1974 -75 ರಿಂದ ಶೋಷಿತರ ದ್ವನಿಯಾಗಿ ಕೆಲಸ ಮಾಡಿದ್ದಾರೆ.1980-85 ರಿಂದಲೂ ರಾಜ್ಯಾದ್ಯಂತ ಭೂಮಿಗಾಗಿ ಚಳುವಳಿ ಮಾಡುತ್ತಾ ಬಂದಿದ್ದೇವೆ. ಮಾಜಿ ಸೈನಿಕರು, ದಲಿತರಿಗೆ ಸರ್ಕಾರ ಭೂಮಿ ಮೀಸಲಿಡ ಬೇಕು. ಆದರೆ, ದಲಿತರಿಗೆ ಮೋಸ ಮಾಡುತ್ತಾ ಬಂದಿದೆ. ದಲಿತರು ಫಾರಂ ನಂ.50,53,57 ರಲ್ಲಿ ಅರ್ಜಿ ಹಾಕಿದ್ದರೂ ಭೂಮಿ ಮಂಜೂರು ಮಾಡಿಲ್ಲ. ಎಲ್ಲಾ ಕಂದಾಯ ಭೂಮಿಯನ್ನು ಅರಣ್ಯಕ್ಕೆ ಹಸ್ತಾಂತರಿಸುತ್ತಿದ್ದಾರೆ. ದಲಿತರಿಗೆ ಭೂಮಿ ನೀಡಲೇ ಬೇಕು ಎಂಬ ಒತ್ತಾಯದಿಂದ ನರಸಿಂಹರಾಜಪುರದಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು ಮುಂದೆ ಎಲ್ಲಾ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದರು.

ಜಿಲ್ಲಾ ಸಂಚಾಲಕ ಭೀಮಯ್ಯ ಮಾತನಾಡಿ, ಈ ಹಿಂದೆ ನರಸಿಂಹರಾಜಪುರದಲ್ಲಿ 122 ಎಕರೆ ಭೂಮಿಗಾಗಿ ಪ್ರತಿಭಟನೆ ಮಾಡಿದ್ದೆವು.ಈವರೆಗೂ ಮಂಜೂರಾಗಿಲ್ಲ. ಈಗ ನ್ಯಾಯಕ್ಕಾಗಿ ತರೀಕೆರೆ ವೆಂಕಟೇಶ್ ನೇತೃತ್ವದಲ್ಲಿ ಆಹೋ ರಾತ್ರಿ ಧರಣಿ ಪ್ರಾರಂಭಿಸಿದ್ದೇವೆ. ಪ್ರತಿಭಟನೆಯಲ್ಲಿ ಕೊಪ್ಪ, ಶೃಂಗೇರಿ ಚಿಕ್ಕಮಗಳೂರು ಹಾಗೂ ವಿವಿಧ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದಾರೆ.

ರಾಜ್ಯ ಮಹಿಳಾ ಒಕ್ಕೂಟದ ಸಂಚಾಲಕಿ ಎಂ.ವಿ.ಭವಾನಿ,ರಾಜ್ಯ ಸಮಿತಿ ಸದಸ್ಯ ರಾಜೇಶ್, ಮುಖಂಡ ಮೃತ್ಯಂಜಯ, ಮೇದ ಸಮಾಜದ ಮುಖಂಡ ಮಂಜುನಾಥ್ , ದಸಂಸ ಮುಖಂಡ ಎಂ.ಜೆ.ಸಿಜು, ಕೋಲಾರದ ವಿ.ವೆಂಕಟ ರಾಮಪ್ಪ, ಜಿಲ್ಲಾ ಸಂಚಾಲಕರಾದ ಜಗದೀಶ್, ಸಿ.ರಮೇಶ್, ಮೋಹನ್ ಕುಮಾರ್, ನಂಜುಂಡಪ್ಪ, ಕೃಷ್ಣ ಮಾಗಲು, ರಾಘ‍ವೇಂದ್ರ, ವೆಂಕ ಟೇಶ್, ವಿಕ್ಟರ್ ಆಂಟೋನಿ ಫಿರೇರ,ಅಣ್ಣಪ್ಪ, ಅಬ್ದುಲ್ ರೆಹಮಾನ್ ನೂರಾರು ಮಹಿಳೆಯರು ಪಾಲ್ಗೊಂಡಿದ್ದಾರೆ.