ಸಾರಾಂಶ
ಕುಷ್ಟಗಿ:
ಇಸ್ಲಾಂ ಧರ್ಮವೂ ಕಾಯಕಕ್ಕೆ ಮಹತ್ವ ಕೊಟ್ಟಂತೆ ಶಿಕ್ಷಣಕ್ಕೂ ಕೊಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಲಿದೆ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಅಂಜುಮನ್ ಇಸ್ಲಾಂ ಪಂಚ ಕಮಿಟಿ, ಖಬರಸ್ಥಾನ ಕಮಿಟಿ, ಅಂಜುಮನ್ ಯೂತ್ ಕಮಿಟಿ ವತಿಯಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಯುವಕರು ಲಗಾಮು ಇಲ್ಲದ ಕುದುರೆಗಳಂತೆ ಓಡುತ್ತಿದ್ದು ಪಾಲಕರು ಅವರಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು. ನಮ್ಮ ಏಳ್ಗೆ ಬಯಸುವುದು ಪಾಲಕರು ಎಂಬುದನ್ನು ಅರಿವಿನಲ್ಲಿ ಇಟ್ಟುಕೊಳ್ಳಬೇಕು ಎಂದರು.ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಧ್ಯಯನ ಮಾಡಿ ಸುಂದರ ಬದುಕು ರೂಪಿಸಿಕೊಳ್ಳಬೇಕು. ಪಾಲಕರು ಸಹ ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿ ಕೊಡಬೇಕೆಂದು ಸಲಹೆ ನೀಡಿದರು.
ಇಪ್ಪತ್ತು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯರು ಕಲಿಕೆಯಿಂದ ವಂಚಿತರು ಎಂಬ ಹಣೆಪಟ್ಟಿ ಇತ್ತು. ಆದರೆ, ಇತ್ತೀಚಿನ 10 ವರ್ಷಗಳಲ್ಲಿ ಹೆಣ್ಣು ಮಕ್ಕಳು ಉತ್ತಮ ಅಭ್ಯಾಸ ಮಾಡುತ್ತಿದ್ದು ಯುವಕರು ಹಿಂದುಳಿದಿದ್ದಾರೆ. ಅವರನ್ನು ಕಲಿಕೆಯತ್ತ ಪ್ರೇರೇಪಿಸುವ ಕೆಲಸವಾಗಬೇಕು ಎಂದು ಹೇಳಿದರು.ಜಿಪಂ ಲೆಕ್ಕಾಧಿಕಾರಿ ಅಮೀನ್ ಅತ್ತಾರ ಮಾತನಾಡಿ, ಭವಿಷ್ಯದ ದೃಷ್ಟಿಯಲ್ಲಿ ನಮ್ಮ ಆಯ್ಕೆಗಳು ಬದಲಾವಣೆಯಾಗಬೇಕಿದೆ. ಜೀವನದಲ್ಲಿ ಗುರಿಗಳು ಸ್ಪಷ್ಟವಾಗಿ ಇರಬೇಕು ಅಂಕ, ಆಸಕ್ತಿ, ಆರ್ಥಿಕತೆಯ ಆಧಾರದ ಮೇಲೆ ಶಿಕ್ಷಣ ಕಲಿಯಬೇಕು. ಉತ್ತಮ ಜೀವನ ಕಟ್ಟಿಕೊಳ್ಳಲು ಶಿಕ್ಷಣ ಕಲಿತು ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಜೀವನದಲ್ಲಿ ಅಭಿವೃದ್ಧಿ ಕಾಣಲು ಶಿಕ್ಷಣವೊಂದೆ ಮಾರ್ಗ. ಶಿಕ್ಷಣ ಕಲಿತರೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬೆಳೆಯಬಹುದು ಎಂದರು.ಈ ವೇಳೆ ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಸಯ್ಯದ್ ಮೈನುದ್ದಿನ ಮುಲ್ಲಾ, ರೆವರೆಂಡ್ ಜಾನ ಫಾದರ್, ಅಭಿನಂದನ ಗೋಗಿ, ನಾಹೀದಾ ಅಮೀನುದ್ದಿನ್ ಮುಲ್ಲಾ, ಹಾಜಿಫಜಿಲ್ ಹಜಿಮ್, ಹಾಜಿ ಜಾಫರ್ ಸಾಧಿಕ್, ಮೌಲಾನ ಹುಸೇನ, ದಾವಲಸಾಬ್ ಗುಡೇದ, ಮಹಿಬೂಬ್ ನೆರೆಬೆಂಚಿ, ಖಾಜಾಹುಸೇನ ನಾಡಗೌಡ್ರು, ನಿಸರಖಾನ್ ಸೌದಾಗಾರ, ಹುಸೇನಪಾಷಾ ಕೊಪ್ಪಳ, ಮೈಬುಬುಸಾಬ್ ಕಮ್ಮಾರ, ಎಚ್.ಎಚ್. ಉಸ್ತಾದ, ಫೈರೂಜ್ ಆನೆಹೊಸೂರು, ಶಾಮಿದಸಾಬ್ ಗಂದೆಣ್ಣಿ, ಶೇಖಉಸ್ಮಾನ್ ಕಲಬುರಗಿ ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.