ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ

| Published : Jun 30 2025, 12:35 AM IST

ಸಾರಾಂಶ

ಯಮಕನಮರಡಿ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ಡಿಗ್ರಿ ಕಾಲೇಜು ಪ್ರಾರಂಭಿಸುವ ಗುರಿ ಹೊಂದಲಾಗಿದೆ

ಕನ್ನಡಪ್ರಭ ವಾರ್ತೆ ಯಮಕನಮರಡಿ

ನಿರುದ್ಯೋಗಿ ಯುವಕರಿಗೆ ವಿವಿಧ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದರೆ ಅಂತಹ ಕಂಪನಿಗಳಿಗೆ ಎಲ್ಲ ಸಹಾಯ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ. ಆದರೆ ಆ ಕಂಪನಿಗಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಉಳ್ಳಾಗಡ್ಡಿ-ಖಾನಾಪೂರದ ಡಿ.ಬಿ.ಹೆಬ್ಬಾಳಿ ಸರ್ಕಾರಿ ಸಂಯುಕ್ತ ಪದವಿ ಪೂರ್ವಮಹಾವಿದ್ಯಾಲಯ, ಸತೀಶ ಜಾರಕಿಹೊಳಿ ಫೌಂಡೇಶನ್ ಗೋಕಾಕ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ವರ್ಷವೂ ಕೂಡಾ ಉದ್ಯೋಗ ಮೇಳ ಆಯೋಜಿಸಲಾಗುವುದು. ರಾಯಬಾಗ ಹಾಗೂ ಗೋಕಾಕನಲ್ಲಿಯೂ ಕೂಡಾ ಉದ್ಯೋಗ ಮೇಳ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯೋಜನೆಯಡಿಲ್ಲಿ ಸುಮಾರು 35 ಸಾವಿರ ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿದ್ದು ರಾಜ್ಯ ಸರ್ಕಾರದಿಂದ ಸುಮಾರು ₹50 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಮನೆ ಮನೆಗೂ ಉದ್ಯೋಗ ಒದಗಿಸುವ ಬೃಹತ್‌ ಉದ್ಯೋಗ ಮೆಳದ ಪ್ರಯೋಜನವನ್ನು ಯುವಕರು ಪಡೆದುಕೊಳ್ಳಬೇಕು ಎಂದ ಅವರು, ಯಮಕನಮರಡಿ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ಡಿಗ್ರಿ ಕಾಲೇಜು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಎಂ.ಎಂ.ಮಗದುಮ್ಮ ಮಾತನಾಡಿದರು. ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕ ಗುರುಪಾದ ಹಿರೇಮಠ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ ಸುಮಾರು 28 ಕಂಪನಿಗಳು ಪಾಲ್ಗೊಂಡಿದ್ದು ಯುವಕರಿಗೆ ಉದ್ಯೋಗ ನೀಡುವುದರೊಂದಿಗೆ ಜೀವನಕ್ಕೆ ಭದ್ರ ಬುನಾದಿ ಹಾಕಿವೆ. ಈ ಉದ್ಯೋಗ ಮೇಳದಲ್ಲಿ 1320 ಅರ್ಜಿಗಳು ನೋಂದಣಿಯಾಗಿವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ ಮಾತನಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ, ಲಕ್ಷ್ಮಣರಾವ್ ಚಿಂಗಳೆ, ಸಿಇಒ ಸಾಧಿಕ್ ಪಟೇಲ್, ಸಂದೀಪಸಿಂಗ್ ಛಡ್ಡಾ, ಶಾಲಾ ಮೇಲುಸ್ತುವಾರಿ ಉಪಾಧ್ಯಕ್ಷ ಮಹಾವೀರ ಸನಕಿ, ಸುಭಾಷ ಹೆಬ್ಬಾಳಿ, ಚಿಕ್ಕೋಡಿಯ ವೃತ್ತಿಪರ ಸಂಯೋಜಕರಾದ ಫಾತಿಮಾ.ಎನ್ ಜಕಾತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಮಗದುಮ್ಮ, ರಾಜು ಅವಟೆ, ಸುಧೀರ ಗಿರಿಗೌಡರ, ರಾವಸಾಹೇಬ ಶಿರಗುಪ್ಪಿ, ಸಚಿನ ಹೆಬ್ಬಾಳಿ, ಪಿಡಿಒ ವಸಂತ ಬಡಿಗೇರ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಾನಮ್ಮಾ ಕೋಣ್ಣೂರ ನಿರೂಪಿಸಿದರು. ಈ ಸಂದರ್ಭದಲ್ಲಿ ದ್ವಿತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದಲ್ಲಿ ಫುಟಬಾಲ್ ಪಂದ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸತ್ಕರಿಸಿದರು.