ಸಾರಾಂಶ
ಅರೆ ಸೇನಾ ಮಾಜಿ ಯೋಧರಿಗೆ ಜಮೀನು, ನಿವೇಶನ ನೀಡಿ: ಆಗ್ರಹ ಕ್ಷೇಮಾಭಿವೃದ್ದಿ ಸಂಘದಿಂದ ತಹಸೀಲ್ದಾರ್ಗೆ ಮನವಿ
ಜಿಲ್ಲಾ ಅರೆ ಸೇನಾ ಮಾಜಿ ಯೋಧರ ಕ್ಷೇಮಾಭಿವೃದ್ದಿ ಸಂಘದಿಂದ ತಹಸೀಲ್ದಾರ್ಗೆ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅರೆ ಸೇನಾ ಪಡೆ ಮಾಜಿ ಯೋಧರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಮೀನು ಹಾಗೂ ನಿವೇಶನ ನೀಡಬೇಕು ಎಂದು ಜಿಲ್ಲಾ ಅರೆ ಸೇನಾ ಮಾಜಿ ಯೋಧರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎ.ಮ್ಯಾಥ್ಯೂ ಆಗ್ರಹಿಸಿದರು.
ಶನಿವಾರ ಜಿಲ್ಲಾ ಅರೆ ಸೇನಾ ಮಾಜಿ ಯೋಧರ ಕ್ಷೇಮಾಭಿವೃದ್ದಿ ಸಂಘದಿಂದ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಅರೆ ಸೇನಾಪಡೆ ಮಾಜಿ ಸೈನಿಕರ ಸಂಘ ಸ್ಥಾಪಿಸಲಾಗಿದೆ. ಸರ್ಕಾರ ನೀಡುವ ಪಿಂಚಣಿ ಯಲ್ಲಿ ನಮ್ಮ ಕುಟುಂಬದವರು ಜೀವನ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇನಾ ಪಡೆಮಾಜಿ ಯೋಧರಿಗೆ ಸವಲತ್ತುಗಳನ್ನು ನೀಡುತ್ತಿದೆ. ಆದರೆ, ಅರೆ ಸೇನಾ ಪಡೆ ಮಾಜಿ ಯೋಧರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸೇನಾ ಪಡೆ ಮಾಜಿ ಯೋಧರಿಗೆ ನೀಡಿದಂತೆ ನಮಗೂ ಜಮೀನು, ನಿವೇಶನ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗೆ ಮನವಿ ನೀಡಿದ್ದೇವೆ ಎಂದರು. ನಮ್ಮ ಸಂಘದ ಮಾಜಿ ಯೋಧರಲ್ಲಿ ತುಂಬ ಪರಿಣಿತಿ ಹೊಂದಿದ ತರಬೇತಿದಾರರು ಹಾಗೂ ಕಮಾಂಡೋಗಳು ಇದ್ದಾರೆ. ಅವರಿಂದ ಯುವಕ, ಯುವತಿಯರು ತರಬೇತಿ ಪಡೆಯಲು ಅನುಕೂಲ ವಾಗುವಂತೆ ಅಗ್ನಿವೀರ್, ಸೇನಾ ಪಡೆ ಮತ್ತು ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ ಬಗ್ಗೆ ಮಾಹಿತಿ, ತರಬೇತಿ ಪಡೆಯಲು ಶುಲ್ಕ ಇಲ್ಲದೆ ತರಬೇತಿ ಕೇಂದ್ರ ತೆರೆದು ತರಬೇತಿ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾದಮಣಿ, ಗೌರವ ಅಧ್ಯಕ್ಷರಾದ ಬಸವರಾಜು, ಸೂರ್ಯ ನಾರಾಯಣ, ಸಂಘದ ಪದಾಧಿಕಾರಿಗಳಾದ ಮುಕಂದಸ್ವಾಮಿ, ಮಹಮ್ಮದ್, ಕೃಷ್ಣಮೂರ್ತಿ, ನರಸಿಂಹರಾಜಪುರ ತಾಲೂಕು ಸಂಘದ ಅಧ್ಯಕ್ಷ ಮಡಬೂರು ಪ್ರವೀಣ್, ಕಾರ್ಯದರ್ಶಿ ಸುನೀಲ್ ಕುಮಾರ್ ಹಾಗೂ ಇತರ ಅರೆ ಸೇನಾ ಪಡೆ ಮಾಜಿ ಯೋಧರು ಇದ್ದರು.