ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸರ್ಕಾರದ ಡಿ ಮತ್ತು ಸಿ ದರ್ಜೆ ನೌಕರರ ಭರ್ತಿಯಲ್ಲಿ ಕಿವುಡರಿಗೆ ಆದ್ಯತೆ ನೀಡಬೇಕು, ಪ್ರಮುಖ ಇಲಾಖೆಗಳಲ್ಲಿ ಕಿವುಡರಿಗೆ ಪರೀಕ್ಷೆ ಬದಲಾಗಿ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘ, ಕಡೂರು ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಕಿವುಡ ಮತ್ತು ಮೂಗರು ಸುವರ್ಣಗಾರ್ಡನ್ ನಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.ಕಿವುಡರಿಗೆ ನೀಡಲಾದ ಉಚಿತ ಬಸ್ ಪ್ರಯಾಣಕ್ಕೆ 100 ಕಿಮೀ ಮಿತಿಯನ್ನು ತೆಗೆದುಹಾಕಬೇಕು. ಈಗಿರುವ ₹1400 ಪಿಂಚಣಿಯನ್ನು ₹5000ಕ್ಕೆ ಹೆಚ್ಚಿಸಬೇಕು. ಸಂಕೇತ ಭಾಷೆ, ಲಿಪ್ರೆಡಿಂಗ್ ಶಿಕ್ಷಣಕ್ಕಾಗಿ ಶಿಕ್ಷಕರ ತರಬೇತಿ ನೀಡಬೇಕು, ಕಿವುಡರಿಗೆ ಜಿಲ್ಲೆ, ರಾಜ್ಯಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕ್ರೀಡಾ ಅನುದಾನ ಸ್ಥಾಪಿಸಬೇಕು. ಕಿವುಡ ದಂಪತಿಗಳಿಗೆ ಕಲ್ಯಾಣ ಅನುದಾನ ಒದಗಿಸಬೇಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಬೆರಾ ಯಂತ್ರಗಳನ್ನು ಒದಗಿಸಬೇಕು, ಕಿವುಡರಿಗಾಗಿಯೇ ಪ್ರತ್ಯೇಕ ವೃದ್ಧಾಶ್ರಮ ಆರಂಭಿಸಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕಿವುಡರು ಕೈಸನ್ನೇ ಮೂಲಕವೇ ತಮ್ಮ ಅಳಲು ತೋಡಿಕೊಂಡರು. ಮನವಿ ಸ್ವೀಕರಿಸಿ ಮಾತನಾಡಿ, ಕಿವುಡ ಸಹೋದರರ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರ ಅವರಿಗೆ ಸವಲತ್ತುಗಳನ್ನು ನೀಡಿ ಸಮಾಜದಲ್ಲಿ ಅವರೂ ಸಹ ಗೌರವಯುತವಾಗಿ ಬದುಕುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದ ಅವರು ನಿಮ್ಮ ಬೇಡಿಕೆಗಳು ಯೋಗ್ಯವಾಗಿದ್ದು, ಬಿಜೆಪಿ ಸಂಪೂರ್ಣ ಬೆಂಬಲವಿದೆ. ಸದನದ ಒಳಗೆ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಭರವಸೆ ನೀಡಿದರು. ಚೇರ್ಮನ್ ಕೆ.ಎಚ್. ಶಂಕರ, ಅಧ್ಯಕ್ಷ ಉಮಾಶಂಕರ ಕೆ.ಎಸ್. ಇತರರು ಇದ್ದರು.