ಕನ್ನಡಪ್ರಭ ವಾರ್ತೆ ಹಲಗೂರು
ರೈತರು ಕೃಷಿಯ ಜೊತೆ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಹಾಲು ಕರೆದು ಉತ್ತಮವಾದ ಜೀವನ ರೂಪಿಸಿಕೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಪಿ.ಎಂ .ನರೇಂದ್ರಸ್ವಾಮಿ ತಿಳಿಸಿದರು.ಮಾರಗೌಡನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈ ಭಾಗದ ಹಾಲು ಉತ್ಪಾದಕರಿಗೆ ಮನ್ಮುಲ್ ವತಿಯಿಂದ ಸಾಕಷ್ಟು ನೆರವು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಈ ಸಂಘ ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯುವುದರ ಮುಖಾಂತರ ರೈತರ ಕಷ್ಟ ಸುಖಗಳಿಗೆ ಸ್ಪಂದಿಸಲಿ ಎಂದರು.
ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಸಂಘ ಸ್ಥಾಪನೆ ಆಗಿರುವುದು ನಿಮ್ಮಗಳ ಅನುಕೂಲಕ್ಕಾಗಿ. ಇಲ್ಲಿಂದ ಪಕ್ಕದ ಗ್ರಾಮಕ್ಕೆ ಹಾಲು ಹಾಕಲು ಹೋಗಬೇಕಾಗಿತ್ತು. ಈಗ ಇಲ್ಲೇ ಪ್ರಾರಂಭವಾಗಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸಂಘದ ವತಿಯಿಂದ 3 ಲಕ್ಷ ರೂ ವೆಚ್ಚದ ಸಾಮಗ್ರಿಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುವಂತೆ ಕೋರಿದರು.ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಮನ್ಮಲ್ ನಿರ್ದೇಶಕ ಕೃಷ್ಣೇಗೌಡ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಮನ್ಮುಲ್ ಉಪ ವ್ಯವಸ್ಥಾಪಕ ನೂತನ್ ಕುಮಾರ್, ಸಂಘದ ಅಧ್ಯಕ್ಷ ತೇಜು ಕುಮಾರ್ ( ಶ್ಯಾಮ್), ಉಪಾಧ್ಯಕ್ಷ ಗುರು ಸಿದ್ದಪ್ಪಾಜಿ, ಕೃಷ್ಣೇಗೌಡ, ಸಿ.ಪಿ.ರಾಜು, ಮನ್ಮುಲ್ ಮಳವಳ್ಳಿ ಉಪ ವಿಭಾಗದ ಉಪ ವ್ಯವಸ್ಥಾಪಕ ಕೆ.ಜೆ ದೇವರಾಜು, ವಿಸ್ತರಣಾ ವ್ಯವಸ್ಥಾಪಕ ನೂತನ್ ಕುಮಾರ್, ನಿರ್ದೇಶಕರಾದ ಕರಿಯಪ್ಪ, ಎಂ.ನಾಗರಾಜು,ರೂಪ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಈ.ವಿವೇಕ್, ಹಾಲು ಪರೀಕ್ಷಕ ಎಂ.ಆರ್.ಚೇತನ್ ಇತರರಿದ್ದರು.