ಸಾರಾಂಶ
ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಪ್ರವಚನ.
ಕನ್ನಡಪ್ರಭ ವಾರ್ತೆ ಯಾದಗಿರಿ
ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ ಸಂಸ್ಕಾರ ನೀಡುವುದನ್ನು ಮರೆಯ ಕೂಡದು ಎಂದು ಖ್ಯಾತ ಉದ್ಯಮಿ ರಾಚನಗೌಡ ಮುದ್ನಾಳ ತಿಳಿಸಿದರು.ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಚ್ಚಾಣದ ಸಿದ್ಧಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನೀಕರಣದ ಇಂದಿನ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಆವಿಷ್ಕಾರ ಮಾಡಿದ್ದಾನೆ. ಆದರೆ, ಸಂಸ್ಕಾರ ರಹಿತನಾಗಿ ಬದುಕುತ್ತಿದ್ದಾನೆ. ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವಗಳನ್ನು ಆಚರಿಸುವುದು ಮನದ ಮೈಲಿಗೆ ತೊಳೆದು, ಅಂತರಂಗದಲ್ಲಿ ಜ್ಞಾನದ ಜ್ಯೋತಿ ಹಚ್ಚಿಸಲು. ಪ್ರತಿವರ್ಷದಂತೆ ಈ ವರ್ಷ ಸಹ ಜಾತ್ರೆ ಅದ್ಧೂರಿಯಾಗಿ ನಡೆಯಲು ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು.ಗ್ರಾಮದ ಗಿರೀಶ್ ಮಾಲಿ ಪಾಟೀಲ್ ಮಾತನಾಡಿ, ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರೀಮಠ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಹೇಳಿದರು.
ಪೀಠಾಧಿಪತಿ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರವಚನಕಾರ ರೇವಣಸಿದ್ದಯ್ಯ ಶಾಸ್ತ್ರಿಗಳು, ಮಹಾಂತಯ್ಯ ಸ್ವಾಮಿ ಹಿರೇಮಠ, ಪ್ರಮುಖರಾದ ನಾಗರೆಡ್ಡಿಗೌಡ ಪಾಟೀಲ್, ಭೀಮರಡ್ಡಿಗೌಡ ಬನ್ನೆಟ್ಟಿ ಸೇರಿದಂತೆ ಇತರರಿದ್ದರು. ಶಿವಪ್ಪ ಮಡಿವಾಳ ನಿರೀಕ್ಷಿಸಿದರು. ವಿರೂಪಾಕ್ಷಯ್ಯ ಸ್ವಾಮಿ ಮಠಪತಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಾತ್ರೆಯ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.