ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಳೆದ ಹತ್ತು ವರ್ಷಗಳಲ್ಲಿ ದೇಶದ ಹಾಗೂ ಸೇನೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗಳಾದ ಪುಲ್ವಾಮಾ, ಬಾಲಕೋಟ, ಉರಿ ದಾಳಿ ಇನ್ನಿತರ ಭಾರತೀಯರ ಹಾಗೂ ಸೈನಿಕರ ಸಾವಿನ ಸರಮಾಲೆ ಬಗ್ಗೆ ತನಿಖಾ ವರದಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನತೆಯ ಮುಂದಿಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದ ಕುರಿತು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅನೇಕ ಮಹತ್ವದ ನಿರ್ಣಯ ಅಂಗೀಕರಿಸಿತು.
ಈ ನಿರ್ಣಯವನ್ನು ರಾಷ್ಟ್ರಪತಿಗಳಿಗೆ ರವಾನಿಸಿತು. ಜಮ್ಮು ಕಾಶ್ಮೀರದ ಫೆಹಲಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡವನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸುತ್ತೋಲೆಯ ಅನುಸಾರ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಮೃತರಿಗೆ ಗೌರವದ ಸಂತಾಪ ಸೂಚಿಸಿ ಈ ಘಟನೆ ಖಂಡಿಸಿತು.ಪಹಲ್ಗಾಂ ಹತ್ಯಾಕಾಂಡದ ವಿಚಾರದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ನಾಗರೀಕ ಸಂಘಟನೆಗಳು ದೇಶದ ಐಕ್ಯತೆ ಮತ್ತು ಏಕತೆಯ ದೃಷ್ಟಿಯಿಂದ ಒಟ್ಟಾಗಿ ನಿಲ್ಲಬೇಕು. ಪಹಲ್ಗಾಮ್ ಅತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನಿಖರವಾದ ಕಾರಣವನ್ನು ಕೇಂದ್ರ ಬಿಜೆಪಿ ಸರ್ಕಾರದ ಗೃಹ ಮತ್ತು ರಕ್ಷಣಾ ಇಲಾಖೆ ದೇಶದ ನಾಗರಿಕರಿಗೆ ದಾಖಲೆ ಸಮೇತದ ಮಾಹಿತಿ ಬಿಡುಗಡೆಗೊಳಿಸಬೇಕು. 2002 ರಲ್ಲಿ ಜಾರಿಗೆ ಬಂದ ಪ್ರಿವೆನ್ಷನ್ ಆಫ್ ಟೆರರಿಸಂ ಆಕ್ಟ್ (ಪೊಟೊ) ಅದು ಸಂಪೂರ್ಣವಾಗಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಅದರ ಪರ್ಯಾಯವಾಗಿ ಭಯೋತ್ಪಾದನೆಯನ್ನು ಸಂಪೂರ್ಣ ನಿಗ್ರಹಕ್ಕೆ ಹೊಸ ಕಾನೂನು ರಚಿಸಲು ಕೇಂದ್ರ ತಜ್ಞರ ಸಮಿತಿಗೆ ಒತ್ತಾಯಿಸಲಾಯಿತು.
ಸುಮಾರು 75 ವರ್ಷಗಳಿಂದ ಭಾರತದ ಅಶಾಂತಿಗೆ ಮೂಲ ಕಾರಣವಾಗಿರುವ ಪಾಕಿಸ್ತಾನದ ಸಂಬಂಧದಲ್ಲಿ ಕೇಂದ್ರ ಸರ್ಕಾರ ಅಂತಿಮ ನಿರ್ಣಯಕ್ಕೆ ಬರಬೇಕು, ಭಯೋತ್ಪಾದನೆ ಸಂಪೂರ್ಣ ನಿಗ್ರಹಕ್ಕೆ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ಹಾಗೂ ಶಾಂತಿ ಸಾಮರಸ್ಯದ ಸಂಸ್ಥೆಗಳಾದ ಸಾರ್ಕ್, ಜಿ ಟ್ವೆಂಟಿ, ಜಿ9 ಹಾಗೂ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಹೊಸ ಒಡಂಬಡಿಕೆಗಾಗಿ ಮುನ್ನುಡಿ ಬರೆಯಬೇಕು ಎಂದು ಆಗ್ರಹಿಸಿದರು.ಭಯೋತ್ಪಾದನಾ ವಿರೋಧಿ ಪ್ರತಿಜ್ಞಾ ವಿಧಿಯನ್ನ ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ. ಕಲ್ಯಾಣ ಸಿರಿಬಂತೆ ಜಿ ಬೋದಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾರ್ಯದರ್ಶಿ ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್ ಮೋದಾಮಣಿ, ಈಶ್ವರ್ ಚಕ್ಕಡಿ ಮೊದಲಾದವರು ಭಾಗವಹಿಸಿದ್ದರು.