ಸಾರಾಂಶ
ಕನ್ನಡಪ್ರಭ ವಾರ್ತೆ ಆನವಟ್ಟಿಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಂಗವಿಕಲೆ ಕಮಲಮ್ಮ ಅವರ ಪತಿ ಮೃತ ತಿರುಕಪ್ಪನವರ ಶವ ಪರೀಕ್ಷೆ ಮಾಡಿ, ವರದಿಯನ್ನು ನೀಡಿ, ಮರಣ ಪ್ರಮಾಣ ಪತ್ರಕ್ಕೆ ಮಾತ್ರ ಮೊದಲು ದಾಖಲಾದ ಆಸ್ಪತ್ರೆ ವ್ಯಾಪ್ತಿಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಪಡೆದುಕೊಳ್ಳಿ ಎಂದು ಪತ್ರ ಬರೆದುಕೊಟ್ಟು ಆರು ವರ್ಷದಿಂದ ಮರಣ ಪತ್ರಕ್ಕಾಗಿ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನಧನಿ ಜನಾ ಸೇವಾ ಸಂಸ್ಥೆಯ ಮಹಿಳಾ ಘಟಕದ ಉಪಾಧ್ಯಕ್ಷೆ ಕುಸುಮ ಒತ್ತಾಯಿಸಿದರು.
ಬಡತನದ ಬೇಗೆಯಲ್ಲಿ ನೊಂದ ಮಹಿಳೆ, ಅಂಗವಿಕಲೆ ಆಗಿರುವುದರಿಂದ ಓಡಾಡುವುದು ಕಷ್ಟ. ಇತಂಹ ಮಹಿಳೆ 2018ರಿಂದ ಅಪಘಾತ ವಿಮೆ ಹಾಗೂ ಸರ್ಕಾರಿ ಸವಲತ್ತು ಪಡೆದುಕೊಳ್ಳಲು ಗಂಡನ ಮರಣ ಪ್ರಮಾಣ ಪತ್ರ ಬೇಕಾಗಿದ್ದು, ಆನವಟ್ಟಿ, ಸೊರಬ , ಶಿವಮೊಗ್ಗದ ಜನನ-ಮರಣ ದಾಖಲಾತಿ ಕಚೇರಿಗಳನ್ನು ಅಲೆದಾಡುವುದೇ ಆಗಿದೆ. ಸಂಬಂಧಿಸಿದ ಅಧಿಕಾರಿಗಳು ಮರಣಪತ್ರ ನೀಡದೆ ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಹೇಳಿ ಸಾಗಿಹಾಕಿದ್ದು ಸರಿಯಲ್ಲ.ಕಮಲಮ್ಮ ಅವರ ಬಳಿ, ಗ್ರಾಮ ಪಂಚಾಯಿತಿಗೆ 21 ದಿವಸಗಳ ಒಳಗೆ ಅರ್ಜಿ ಕೊಟ್ಟು ಆಗಿನ ಪಿಡಿಒ ಅವರು ಮರಣ ದಾಖಲಿಸಿ ದೃಢಿಕರಣ ನೀಡಿರುವ ಪತ್ರ, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರತಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ನೀಡಿರುವ ಶವ ಪರೀಕ್ಷೆಯ ವರದಿ ಪತ್ರಗಳು, ರೋಗಿ ಮೊದಲು ದಾಖಲಾದ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಮರಣ ಪತ್ರ ಪಡೆಯುವಂತೆ ಜಿಲ್ಲಾ ವೈಧ್ಯ ಅಧಿಕಾರಿ ನೀಡಿರುವ ಪತ್ರ ಇವೆ.
ಇಷ್ಟೆಲ್ಲಾ ದಾಖಲೆಗಳು ಇದ್ದು, ತಿರುಕಪ್ಪ ಮರಣ ಹೊಂದಿ ಆರು ವರ್ಷಗಳಾಗಿವೆ. ಈಗ ಮರಣ ಪತ್ರ ನೀಡಲು ಬರುವುದಿಲ್ಲ, ಕೋರ್ಟ್ ಹೋಗಿ ಪಡೆದುಕೊಳ್ಳಿ ಎಂದರೇ ನ್ಯಾಯವೇ? ಮಹಿಳೆಯ ದುರ್ಬಲತೆಯನ್ನು ಕಂಡು ಅಧಿಕಾರಿಗಳು ಉದಾಸೀನ ತೋರಿದಂತೆ ಕಾಣುತ್ತದೆ. ಅಧಿಕಾರಿಗಳು ತಪ್ಪು ಮಾಡಿ, ನೊಂದ ಅಂಗವಿಕಲೆ ಮಹಿಳೆಯನ್ನು ಕೋರ್ಟ್ಗೆ ಹೋಗವಂತೆ ಮಾಡಿದ್ದು ಸರಿಯಲ್ಲ ಎಂದರು.ಜಿಲ್ಲಾ ಅಧಿಕಾರಿ ಅವರು ಮಹಿಳೆಯ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ, ಆನವಟ್ಟಿಯ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮೂಲಕ ನೊಂದ ಮಹಿಳೆಯ ಪತಿಯ ಮರಣ ಪ್ರಮಾಣ ಪತ್ರ ನೀಡುವಂತೆ ಮಾರ್ಗದರ್ಶನ ನೀಡಬೇಕು ಎಂದು ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಪುಷ್ಪಾ, ರಾಜೇಶ್ವರಿ, ಶೋಭಾ ಅಗ್ರಹಿಸಿ, ಮನವಿ ಸಲ್ಲಿಸಿದರು.
- - --ಕೆಪಿ13ಎಎನ್ಟಿ1::
ನೊಂದ ಅಂಗವಿಕಲೆ ಮಹಿಳೆ ಕಮಲಮ್ಮ ಅವರ ಮೃತ ಪತಿ ತಿರುಕಪ್ಪ ಅವರ ಮರಣ ಪತ್ರ ನೀಡುವಂತೆ ಆನವಟ್ಟಿ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಒತ್ತಾಯಿಸಿ ಜನಧನಿ ಜನಾ ಸೇವಾ ಸಂಸ್ಥೆ ಮಹಿಳಾ ಘಟಕದವರು ಮನವಿ ಸಲ್ಲಿಸಿದರು.