ಸಣ್ಣ ವ್ಯಾಪಾರಿಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುವ ಬದಲು ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನಾ ಘಟಕಗಳ ವಿರುದ್ಧವೇ ಕಠಿಣ ಕ್ರಮ ಕೈಗೊಂಡು ಉತ್ಪಾದನೆ ಮತ್ತು ವಿತರಣೆಯ ಮೂಲ ಹಂತದಲ್ಲೇ ನಿಯಂತ್ರಿಸಬೇಕು. ಪ್ಲಾಸ್ಟಿಕ್ ನಿಷೇಧದ ಸಂದರ್ಭದಲ್ಲಿಯೂ ಇದೇ ರೀತಿಯ ಕ್ರಮ ಅನುಸರಿಸಬೇಕು ಎಂದು ಆಗ್ರಹಿಸಿದರು. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಸಿಗರೇಟ್, ಮದ್ಯ ಸೇರಿದಂತೆ ಇತರ ವಸ್ತುಗಳ ವಿಚಾರದಲ್ಲಿಯೂ ಸರ್ಕಾರ ಸಮಾನ ನೀತಿ ಅನುಸರಿಸಬೇಕು. ಸಣ್ಣ ವ್ಯಾಪಾರಿಗಳ ಸಮಸ್ಯೆಗಳಿಗೆ ವರ್ತಕರ ಸಂಘ ಹಾಗೂ ಸಂಬಂಧಪಟ್ಟ ಸಂಘಸಂಸ್ಥೆಗಳು ಸ್ಪಂದಿಸಬೇಕು. ನಿಷೇಧದಿಂದ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವ ವ್ಯಾಪಾರಿಗಳ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧವನ್ನು ಏಕಾಏಕಿ ಜಾರಿಗೊಳಿಸುವ ಬದಲು, ಈಗಾಗಲೇ ವ್ಯಾಪಾರಿಗಳು ಖರೀದಿಸಿರುವ ಹಳೆಯ ದಾಸ್ತಾನು ತೆರವುಗೊಳಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಪಾನ್ ಮಸಾಲ ಮಾರಾಟಗಾರರ ಒಕ್ಕೂಟದ ಸಂಚಾಲಕ ಮಧು ಒತ್ತಾಯಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯದ ದೃಷ್ಟಿಯಿಂದ ಸರ್ಕಾರ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧಕ್ಕೆ ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈಗಾಗಲೇ ಸಾಲ ಮಾಡಿ ಅಥವಾ ಸಣ್ಣ ಬಂಡವಾಳದಲ್ಲಿ ಖರೀದಿಸಿರುವ ಸರಕನ್ನು ಏನು ಮಾಡಬೇಕು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು. ನಿಷೇಧದಿಂದ ಸಣ್ಣಪುಟ್ಟ ಅಂಗಡಿಗಳನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಅನೇಕ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವಾಗಲಿದೆ. ಹಳೆಯ ದಾಸ್ತಾನು ತೆರವುಗೊಳಿಸಲು ಕಾಲಾವಕಾಶ ನೀಡಬೇಕು. ಇಲ್ಲವೇ ಸರ್ಕಾರವೇ ವ್ಯಾಪಾರಿಗಳ ಬಳಿಯಿರುವ ದಾಸ್ತಾನು ಖರೀದಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಅವಕಾಶ ನೀಡದೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸುವುದು ಸರಿಯಲ್ಲ ಎಂದು ಹೇಳಿದರು. ನಿಷೇಧದ ಉದ್ದೇಶ ಆರೋಗ್ಯ ರಕ್ಷಣೆಯಾಗಿದ್ದರೆ, ಸಣ್ಣ ವ್ಯಾಪಾರಿಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುವ ಬದಲು ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನಾ ಘಟಕಗಳ ವಿರುದ್ಧವೇ ಕಠಿಣ ಕ್ರಮ ಕೈಗೊಂಡು ಉತ್ಪಾದನೆ ಮತ್ತು ವಿತರಣೆಯ ಮೂಲ ಹಂತದಲ್ಲೇ ನಿಯಂತ್ರಿಸಬೇಕು. ಪ್ಲಾಸ್ಟಿಕ್ ನಿಷೇಧದ ಸಂದರ್ಭದಲ್ಲಿಯೂ ಇದೇ ರೀತಿಯ ಕ್ರಮ ಅನುಸರಿಸಬೇಕು ಎಂದು ಆಗ್ರಹಿಸಿದರು. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಸಿಗರೇಟ್, ಮದ್ಯ ಸೇರಿದಂತೆ ಇತರ ವಸ್ತುಗಳ ವಿಚಾರದಲ್ಲಿಯೂ ಸರ್ಕಾರ ಸಮಾನ ನೀತಿ ಅನುಸರಿಸಬೇಕು. ಸಣ್ಣ ವ್ಯಾಪಾರಿಗಳ ಸಮಸ್ಯೆಗಳಿಗೆ ವರ್ತಕರ ಸಂಘ ಹಾಗೂ ಸಂಬಂಧಪಟ್ಟ ಸಂಘಸಂಸ್ಥೆಗಳು ಸ್ಪಂದಿಸಬೇಕು. ನಿಷೇಧದಿಂದ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವ ವ್ಯಾಪಾರಿಗಳ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಇರ್ಷಾದ್ ಹಾಗೂ ವಾಸು ಉಪಸ್ಥಿತರಿದ್ದರು.