ಪೋಷಕರು ಜನ್ಮ ಕೊಟ್ಟರೆ ಗುರುಗಳು ದಾರಿ ತೋರಿಸಿದ್ಧಾರೆ. ಅವರು ತೋರಿಸಿದ ಮಾರ್ಗದಲ್ಲಿ ಸಾಗಿದ್ದರಿಂದ ಇಂದು ನಾವು ಮಹಾನಗರಗಳಲ್ಲಿ ಸ್ವಂತ ಉದ್ದಮೆ ಇಲ್ಲವೆ ಉದ್ಯೋಗ ಮಾಡುತ್ತಿದ್ದೇವೆ, ಹಣವಂತರಾಗಿರುವರು ತಮ್ಮ ಗುರುಗಳನ್ನು ನೆನಪು ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಇತ್ತೀಚಿನ ದಿನಗಳಲ್ಲಿ ದಾನ ಹಾಗೂ ಧ್ಯಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಹಾಗಾಗಿ ಉದ್ದಿಮೆ ಮಾಡುತ್ತಿರುವವರು ದಾನ ಮಾಡಲು ಮುಂದಾಗಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದಾಗಿದೆ ಎಂದು ನಿವೃತ್ತ ಶಿಕ್ಷಕ ಮಹದೇವಶಾಸ್ತ್ರಿ ಅಭಿಪ್ರಾಯಪಟ್ಟರು.ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಬಾಗೂರು ಸರ್ಕಾರಿ ಪ್ರೌಢಶಾಲೆ ೧೯೯೪- ೯೫ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಗುರುಗಳಿಗೆ ಗೌರವ ತರಬೇಕೆಂದರೆ ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ,ದಾನ ಮಾಡಬೇಕು, ನಿಮ್ಮ ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮಾಡಬೇಕು ಎಂದರು.
ಎರಡು ದಶಕಗಳ ಹಿಂದೆ ಶಿಕ್ಷಣದ ಜೊತೆ ಶಾಲೆಗಳಲ್ಲಿ ನೀತಿ ಕಥೆಗಳನ್ನು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರಿಂದ ಸ್ವಾರ್ಥ ಸಮಾಜ ಇರಲಿಲ್ಲ, ಅಂದು ಶಿಕ್ಷಕರಿಗೆ ನೀಡುವ ಗೌರವ ಇತ್ತೀಚಿನ ದಿವಸಗಳಲ್ಲಿ ಇಲ್ಲದಂತಾಗಿದೆ, ಗುರು ಶಿಷ್ಯರ ಸಂಬಂಧ ಸಾಕಷ್ಟು ಹಾಳಾಗಿದೆ, ಗುರುವಿನಲ್ಲಿ ದೇವರ ಕಾಣುವ ಕಾಲ ಬದಲಾಗಿದೆ. ಗುರುವಿನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಗುರು- ಶಿಷ್ಯರು ಒಟ್ಟಾಗಿ ಸಾಕಷ್ಟು ಅನಾಚಾರ ಮಾಡುವಂಥ ಘಟನೆಗಳು ಬೆಳಕಿಗೆ ಬಂದಿವೆ ಎಂದರು.ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ಮೌಲ್ಯಯುತ ಶಿಕ್ಷಣಕ್ಕಿಂತ ಅಂಕಗಳಿಕೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ, ಗುಣಕ್ಕೆ ಬೆಲೆ ಇಲ್ಲ, ಹಣವಂತರಿಗೆ ಮಾತ್ರ ಈ ಜಗತ್ತಿನಲ್ಲಿ ಬೆಲೆ ನೀಡಲಾಗುತ್ತಿದೆ. ಹಾಗಾಗಿ ಸಾಕಷ್ಟು ಅನಾಚಾರಗಳು ನಡೆಯುತ್ತಿವೆ, ಯಾವಾಗ ಸಜ್ಜನರಿಗೆ, ಹೃದಯವಂತರಿಗೆ, ಗುಣವಂತರಿಗೆ ಬೆಲೆ ನೀಡುತ್ತೇವೆಯೋ ಅಂದು ನಾವು ಪಡೆದ ಶಿಕ್ಷಣಕ್ಕೆ ಬೆಲೆ ಬರುತ್ತದೆ, ನಿಮ್ಮ ಗುರುಗಳಿಗೂ ಹೆಸರು ಬರುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಶ್ರೀನಿವಾಸ್ ಮಾತನಾಡಿ, ಕಷ್ಟದಲ್ಲಿ ಇದ್ದವರಿಗೆ ಸಹಕಾರ ನೀಡಬೇಕು, ಆಗ ನಾವು ಶಿಕ್ಷಣವಂತರಾಗಿದ್ದಕ್ಕೂ ಸಾರ್ಥಕವಾಗುತ್ತದೆ, ಸಹಾಯ ಮಾಡಿದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು, ಸಾಕಷ್ಟು ಮಂದಿ ಪ್ರಚಾರಕ್ಕಾಗಿಯೇ ಸಹಾಯ ಮಾಡುತ್ತಾರೆ, ರಸ್ತೆ ಅಪಘಾತದಲ್ಲಿ ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿರುವವರನ್ನು ರಕ್ಷಣೆ ಮಾಡಿದ್ದನ್ನು ಸ್ವಾರ್ಥಕ್ಕಾಗಿ, ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುವ ಕಾಲ ಬಂದಿದೆ ಎಂದು ಕಳವಳ ವ್ಯಕ್ತ ಪಡಿಸಿದರು.ಬದುಕಿನಲ್ಲಿ ಸಂತೋಷ ಹಾಗೂ ದುಃಖ ಎರಡನ್ನೂ ಸಮನಾಗಿ ಸ್ವೀಕಾರ ಮಾಡಿ, ದಾಂಪತ್ಯದಲ್ಲಿ ಸಣ್ಣ ಪುಟ್ಟ ತಪ್ಪುಗಳಿಂದ ಬಿರುಕು ಬರುತ್ತದೆ, ಹಾಗಾಗಿ ಸೋಲು- ಗೆಲುವು ಎರಡನ್ನೂ ಸಮನಾಗಿ ಸ್ವೀಕಾರ ಮಾಡುವುದನ್ನು ರೂಢಿಸಿಕೊಂಡರೆ ಬದುಕು ನೆಮ್ಮದಿಯಾಗಿ ಇರುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸಾಲದು, ಸಂಸ್ಕಾರ ಕೊಡಲು ಪೋಷಕರು ಮುಂದಾಗಬೇಕು ಎಂದು ಹಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಳೆ ವಿದ್ಯಾರ್ಥಿ ದೇವರಾಜು ಮಾತನಾಡಿ, ಪೋಷಕರು ಜನ್ಮ ಕೊಟ್ಟರೆ ಗುರುಗಳು ದಾರಿ ತೋರಿಸಿದ್ಧಾರೆ. ಅವರು ತೋರಿಸಿದ ಮಾರ್ಗದಲ್ಲಿ ಸಾಗಿದ್ದರಿಂದ ಇಂದು ನಾವು ಮಹಾನಗರಗಳಲ್ಲಿ ಸ್ವಂತ ಉದ್ದಮೆ ಇಲ್ಲವೆ ಉದ್ಯೋಗ ಮಾಡುತ್ತಿದ್ದೇವೆ, ಹಣವಂತರಾಗಿರುವರು ತಮ್ಮ ಗುರುಗಳನ್ನು ನೆನಪು ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.ಶಿಕ್ಷಕರಾದ ಶಿವಪ್ಪ, ಸೂರ್ಯನಾರಾಯಣ, ಚಂದ್ರಶೇಖರ್, ಸತೀಶ್, ಚನ್ನಪ್ಪ, ದೇವರಾಜು, ಹಿರಿಯಣ್ಣ, ಮಂಜಪ್ಪ, ತಿಮ್ಮೇಗೌಡ, ಗೋವಿಂದಪ್ಪ, ಅಲ್ಗೇಗೌಡ, ರಾಮಸ್ವಾಮಿ, ಸೋಮಶೇಖರ್, ರಂಗಸ್ವಾಮಿ ಇವರನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಹಳೇ ವಿದ್ಯಾರ್ಥಿಗಳಾದ ಮರುವನಹಳ್ಳಿ ದೇವರಾಜು, ಬಿ.ಎಸ್.ಮಂಜಣ್ಣ, ಪಂಕಜ, ಕೃಷ್ಣಪ್ರಕಾಶ್, ದಿನೇಶ್, ಪರಮೇಶ್ ಗುರುವಂದನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.