ಬಿಜೆಪಿ ಅಭ್ಯರ್ಥಿ ವಿರುದ್ಧ ಹೆಚ್ಚುತಿದೆ ಗೋ ಬ್ಯಾಕ್ ಧ್ವನಿ

| Published : Mar 30 2024, 12:46 AM IST

ಸಾರಾಂಶ

ಪಕ್ಷದವರಿಂದಲೆ ಹಾಲಿ ಸಂಸದ, ಅಭ್ಯರ್ಥಿ ಅಮರೇಶ್ವರ ನಾಯಕ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭೆ ಚುನಾವಣೆ ಘೋಷಣೆ ನಂತರ ಟಿಕೆಟ್‌ ಹಂಚಿಕೆ ಗೋಜು ಮುಗಿಯಿತು ಎಂದು ಅಂದುಕೊಳ್ಳುತ್ತಿದ್ದ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಹೊಸ ತಲೆನೋವು ಶುರುವಾಗಿದೆ.

ರಾಯಚೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಟಿಕೆಟ್‌ ಘೋಷಿಸಿದ ಬೆನ್ನಲ್ಲಿಯೇ ಆಕಾಂಕ್ಷಿಗಳು ಪಕ್ಷದ ತೀರ್ಮಾನಕ್ಕೆ ತಲೆಬಾಗದೇ ತಿರುಗಿಬಿದಿದ್ದು, ಇದರ ಪರಿಣಾಮ ಹಾಲಿ ಸಂಸದ, ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಸ್ವ-ಪಕ್ಷದವರೇ ಗೋ ಬ್ಯಾಕ್‌ ಧ್ವನಿ ಎತ್ತುತ್ತಿದ್ದಾರೆ. ಟಿಕೆಟ್‌ ಘೋಷಣೆಯಾಗಿ ವಾರ ಕಳೆಯುತ್ತಿದ್ದರು ಬಂಡಾಯದ ಬಿಸಿ ಜಾಸ್ತಿಯಾಗುತ್ತಿದೆಯೇ ವಿನಾಃ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಅಮರೇಶ್ವರ ನಾಯಕ ಜೊತೆಗೆ ಮಾಜಿ ಸಂಸದ ಬಿವಿ ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್‌ ಅವರು ಟಿಕೆಟ್‌ಗಾಗಿ ಗಟ್ಟಿ ಪ್ರಯತ್ನವನ್ನೆ ನಡೆಸಿದ್ದರು. ಬಿಜೆಪಿ ಆಂತರಿಕ ಹಾಗೂ ಬಾಹ್ಯ ಸಮೀಕ್ಷೆ ರೀತ್ಯ ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್ ದೊರೆಯುತ್ತದೆ ಎನ್ನುವ ಗ್ಯಾರಂಟಿ ಘೋಷ ಎಲ್ಲೆಡೆ ಪಸರಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಾಣದ ಕೈಗಳ ಚಮತ್ಕಾರದಡಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಪಕ್ಷವು ಮತ್ತೊಮ್ಮೆ ಅವಕಾಶ ನೀಡಿ ಟಿಕೆಟ್‌ ಘೋಷಿಸಿತು. ಇದು ಕೊನೆ ಗಳಿಗೆಯವರೆಗೂ ಆಸೆಯಿಟ್ಟುಕೊಂಡಿದ್ದ ಬಿ.ವಿ.ನಾಯಕ ಹಾಗೂ ಬೆಂಬಲಿಗರಲ್ಲಿ ಅಸಮಧಾನದ ಜ್ವಾಲಾಮುಖಿ ಸಿಡಿಯುವಂತೆ ಮಾಡಿದ್ದು ಇವರ ಜೊತೆಗೆ ತಿಪ್ಪರಾಜು ಹಾಗೂ ಬೆಂಬಲಿಗರು ಸಹ ಹಾಲಿ ಸಂಸದರ ಟಿಕೆಟ್ ನೀಡಿದ್ದಕ್ಕೆ ಅಸಮಧಾನ ಬಹಿರಂಗಪಡಿಸುತ್ತಿದ್ದಾರೆ.

ಸಫಲತೆಯಾಗದ ಸಂಧಾನ:

ಟಿಕೆಟ್‌ ವಂಚಿತ ಬಿ.ವಿ.ನಾಯಕ ಹಾಗೂ ತಿಪ್ಪರಾಜು ಅಸಮಧಾನ ತಣಿಸುವ ಪ್ರಯತ್ನಗಳು ಸಫಲತೆ ಕಂಡಿಲ್ಲ. ಕುಷ್ಟಗಿ ಶಾಸಕ, ಬಿಜೆಪಿ ಮುಖ್ಯ ಸಚೇತಕ, ಲೋಕಸಭಾ ಉಸ್ತುವಾರಿ ದೊಡ್ಡನಗೌಡ ಪಾಟೀಲ್‌ಹಾಗೂ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಾ ಅವರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿರುವ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ತಿಪ್ಪರಾಜು ಹವಲ್ದಾರ್ ಅವರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿ, ಅಸಮಧಾನ ನಿವಾರಿಸುವ ಪ್ರಯತ್ನ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ.