ಇತಿಹಾಸ ತಿಳಿಯಲು ಮೂಲ ಆಕರದ ಮೊರೆ ಹೋಗಿ

| Published : Nov 29 2024, 01:00 AM IST

ಸಾರಾಂಶ

ಪತ್ರಗಾರ ಇಲಾಖೆಯ ಸಹಯೋಗದಲ್ಲಿ ನಡೆದ ಉಪನ್ಯಾಸ ಮಾಲೆಯಲ್ಲಿ ಡಾ.ವೀರಶೆಟ್ಟಿ ಸಲಹೆ

ಕನ್ನಡಪ್ರಭ ವಾರ್ತೆ ಚವಡಾಪುರ

ನಾವಿಂದು ಏನಾಗಿದ್ದೇವೆ ಎಂದು ಎಲ್ಲರಿಗೂ ಕಾಣುತ್ತದೆ. ಆದರೆ ಕಾಲಗರ್ಭದಲ್ಲಿ ಹುದಗಿರುವ ಇತಿಹಾಸ ಅರಿಯಲು ಮೂಲ ಆಕರಗಳ ಮೊರೆ ಹೋಗಬೇಕಾಗುತ್ತದೆ ಎಂದು ವಿಭಾಗೀಯ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ.ವೀರಶೆಟ್ಟಿ ಹೇಳಿದರು.

ಅಫಜಲ್ಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಇತಿಹಾಸ ವಿಭಾಗ ಮತ್ತು ಪತ್ರಗಾರ ಇಲಾಖೆಯ ಸಹಯೋಗದಲ್ಲಿ ನಡೆದ ಉಪನ್ಯಾಸ ಮಾಲೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಧ್ಯಯನಶೀಲರಾಗುವುದರ ಜೊತೆಗೆ ಇತಿಹಾಸ ಅರಿಯಲು ಮೂಲ ಆಕರಗಳ ಮೊರೆ ಹೋಗಬೇಕು. ಸಮಾಜ ಇಂದು ತಪ್ಪು ತಿಳುವಳಿಕೆಗಳಿಂದಾಗಿ ಇತಿಹಾಸ ಸುಳ್ಳು ಎಂದು ವಾದಿಸುವ ಮತ್ತು ಅಪನಂಬಿಕೆಗಳತ್ತ ವಾಲುವಂತಾಗಿದೆ. ಈ ಅಪನಂಬಿಕೆಗಳನ್ನು ಜನರಿಂದ ತೆಗೆದು ಹಾಕಿ ನೈಜ ಇತಿಹಾಸ ತಿಳಿಸುವ ಕೆಲಸ ನಡೆಯಬೇಕು. ಹೀಗಾಗಿ ಸಂಶೋಧಕರು, ವಿದ್ಯಾರ್ಥಿಗಳು ಪತ್ರಗಾರ ಇಲಾಖೆಯಲ್ಲಿರುವ ದಾಖಲೆಗಳ ಸಹಾಯ ಪಡೆದುಕೊಳ್ಳಬಹುದಾಗಿದೆ. ನಮ್ಮ ಇಲಾಖೆಯಲ್ಲಿ 39 ವಿಭಾಗಗಳಿಗೆ ಸಂಬಂಧ ಪಟ್ಟ 16 ಲಕ್ಷ ದಾಖಲೆಗಳ ಕಡತಗಳಿವೆ ಎಂದು ತಿಳಿಸಿದರು.

ವಿರೇಂದ್ರ ಪಾಟೀಲ್ ಕಾಲೇಜಿನ ಪ್ರಾಚಾರ್ಯ ಕೆ.ನಾರಾಯಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗುವುದರ ಜೊತೆಗೆ ಸಂಶೋಧನಾ ಗುಣ ಬೆಳೆಸಿಕೊಳ್ಳಬೇಕು. ತಾಲೂಕಿನಲ್ಲೂ ಸಾಕಷ್ಟು ಶ್ರೀಮಂತ ಇತಿಹಾಸವಿದೆ. ಅದೆಲ್ಲವನ್ನು ಹೊರತೆಗೆದು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಇತಿಹಾಸ ಕುರಿತು ಹೆಚ್ಚಿನ ಜ್ಞಾನಾರ್ಜನೆಗೆ ಪತ್ರಗಾರ ಇಲಾಖೆಯ ಸಹಾಯ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಡಾ.ಸೂರ್ಯಕಾಂತ ಉಮಾಪುರೆ, ಡಾ.ಸಾವಿತ್ರಿ ಕೃಷ್ಣ ಮಾತನಾಡಿದರು. ಈ ವೇಳೆ ಹಿರೂ ರಾಠೋಡ, ಡಾ.ಚಿನ್ನಾ, ಡಾ.ಸಂಗಣ್ಣ ಎಂ.ಸಿಂಗೆ, ಡಾ.ನಾಗವೇಣಿ, ಡಾ.ಶ್ರೀದೇವಿ ರಾಠೋಡ, ಡಾ. ವಿನಾಯಕ ಕುಲಕರ್ಣಿ, ಡಾ.ಗಿರಿಜಾ, ಡಾ.ಕವಿತಾ, ಡಾ.ಜಯಕುಮಾರ ನೂಲ್ಕರ್, ಡಾ.ಸುರೇಖಾ ಕರೂಟಿ, ಡಾ.ದಶರಥ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.