ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಗುರಿ ಮುಟ್ಟಲು ಭಕ್ತಿ, ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನ ನೀಡಿದ್ದಾನೆ. ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು. ಒಂದು ವಜ್ರವನ್ನುಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ. ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು. ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು. ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ. ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ಅವರು ವಿವರಿಸಿದರು.ಇಂದು ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು 8,000 ಮಂದಿಯಿಂದ ಗೀತ ಪಠನ ಮಾಡಿಸಿದ್ದಾರೆ. ಇದೊಂದು ಅದ್ಭುತ ಕ್ಷಣ ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.
ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು, ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲ. ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು. ಅದೇ ಗುರಿ. ಆ ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ ಎಂದರು.ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ. ಹಾಗಾಗಿ ವೇದವ್ಯಾಸರನ್ನು ಮರೆಯಬಾರದು. ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು. ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ ಎಂದರು.
ಗುರುಕೃಪೆಯಿಂದ ಅನುಭವ ಬರುತ್ತದೆ. ನಮಗೆ ಗುರು ಕೃಪೆ ಸಿಗುತ್ತದೆ. ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ. ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ.ಯಾರು ಬೇಕಾದರೂ ಚಾತುರ್ಮಸ್ಯ ವ್ರತ ಮಾಡಬಹುದು. ನೀವು ಮಾಡಿ ನಾವೀಗ ಮೈಸೂರಿನಲ್ಲೇ ಇಂದಿನಿಂದ ಚಾತುರ್ಮಾಸ್ಯ ವ್ರತ ಕೊಂಡಿದ್ದೇವೆ. ನೀವು ಒಂದಲ್ಲ ಒಂದು ಅಂದರೆ ಕ್ಷೀರ ವ್ರತ, ಕ್ಷಾರ ವ್ರತವನ್ನು ಈ ಮಾಸಗಳಲ್ಲಿ ಮಾಡಬಹುದು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ. ಎಸ್. ಶ್ರೀವತ್ಸ ಬಿಡುಗಡೆ ಗೊಳಿಸಿದರು.ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥಸಾಮೀಜಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಶ್ರೀ ವೆಂಕಟೇಶ್ವರಸನ್ನಿಧಿ ಮತ್ತು ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ತರಲಾಯಿತು.ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥಸಾಮೀಜಿ ಪ್ರಾರ್ಥನಾ ಮಂದಿರದಲ್ಲಿನ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.
ನಂತರ ಸಂಕಲ್ಪ ಮಾಡಿಭಕ್ತ ರಿಂದಲೂಸಂಕಲ್ಪ ಮಾಡಿಸಿದರು. ಗುರು ಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು.ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 21ನೇ ಚಾತುರ್ಮಾಸ್ಯವ್ರತದೀಕ್ಷಾ ಮಹೋತ್ವವವೂ ಕೂಡಾ ನೆರವೇರಿತು.
ರಾಜ್ಯ, ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.ನಗರದ ವಿವಿಧೆಡೆ ಗುರು ಪೂರ್ಣಿಮೆ....ಕನ್ನಡಪ್ರಭ ವಾರ್ತೆ ಮೈಸೂರು
ಗುರು ಪೂರ್ಣಿಮೆ ಅಂಗವಾಗಿ ನಗರದ ವಿವಿಧ ಸಾಯಿಬಾಬ ಮಂದಿರ ಮತ್ತು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ನೆರವೇರಿತು.ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ತ್ಯಾಗರಾಜ ರಸ್ತೆಯ ಶಿರಡಿ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿತು.
ಬೆಳಗ್ಗೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಮಂದಿರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾಘವೇಂದ್ರ ಮಠದ ಆವರಣದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಅಂತೆಯೇ ಸಾಯಿ ಮಂದಿರದಲ್ಲಿಯೂ ಪ್ರಸಾದ ನೀಡಲಾಯಿತು. ಉಳಿದಂತೆಯ ನಜರಬಾದ್ನ ಸಾಯಿ ಮಂದಿರ, ತ್ಯಾಗರಾಜ ರಸ್ತೆಯ ಶಿರಡಿ ಸಾಯಿಬಾಬು ಮಂದಿರದಲ್ಲಿಯೂ ವಿಶೇಷ ಪೂಜೆ ನಡೆಯಿತು.
ಹೆಬ್ಬಾಳಿನ ಶ್ರೀ ಶಿರಡಿ ಸಾಯಿ ಸೇವಾಶ್ರಮ ಟ್ರಸ್ಟ್ ನಲ್ಲಿ ಗುರು ಪೂರ್ಣಿಮೆ ಅಂಗವಾಗಿ ಸಾಮೂಹಿಕ ಗ್ರಹದೋಷ ನಿವಾರಣೆಗೆ ನವಗ್ರಹ ಹೋಮ, ಪುಷ್ಪಾರ್ಚನೆ, ಕಾಕಡಾರತಿ ಪೂಜೆ, ಗುರುಭಜನೆ, ಲಕ್ಷ್ಮೀ ಪೂಜೆ ನೆರವೇರಿತು.ಶ್ರೀರಾಮಕೃಷ್ಣ ಆಶ್ರಮದಲ್ಲಿ ಶ್ರೀ ಗುರುಪೂರ್ಣಿಮೆ ಅಂಗವಾಗಿ ವೇದ ಪಠನ, ಮಂಗಳಾರತಿ ಮತ್ತು ಭಜನೆ, ವಿಷ್ಣುಸಹಸ್ರನಾಮ ಪಾರಾಯಣ, ಪೂಜೆ, ಭಜನೆ, ಗುರುಪೂರ್ಣಿಮೆ ಕುರಿತು ಪ್ರವಚನ, ಆರತಿ ಮತ್ತು ಪುಷ್ಪಾಂಜಲಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಹೆಬ್ಬಾಳು- ವಿಜಯನಗರ ಬ್ರಾಹ್ಮಣ ಸಂಘದ ವತಿಯಿಂದ ಆಚಾರ್ಯತ್ರಯರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.ದೀಕ್ಷಿತ್ ಆರೋಗ್ಯ ಧಾಮದಲ್ಲಿ ಆನಂದ ಆರೋಗ್ಯ ಕಾರ್ಯಕ್ರಮ ನಡೆಯಿತು. ಈ ವೇಳೆ ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ ಗಾಯನ, ವಿಶ್ವಂಬರ ಭಾಗವತ್ಅವರಿಂದ ಸಹ ಗಾಯನಕ್ಕೆ ಅಮೋಘ ನೆಡನೂರ್ ಅವರಿಂದ ಪಿಟೀಲು, ಪಿ.ಎಸ್. ಶ್ರೀಧರ್ ಅವರಿಂದ ಮೃದಂಗ ಮತ್ತು ವಿದ್ವಾನ್ವಿ.ಎಸ್. ರಮೇಶ್ ಮೋರ್ಚಿಂಗ್ ನೆರವು ನೀಡಿದರು.